×
Ad

‘ಆಪರೇಷನ್ ಅಭ್ಯಾಸ್' | ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿ ಅಣಕು ಕವಾಯತು

Update: 2025-05-07 20:07 IST

ಬೆಂಗಳೂರು : ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ರಾಜಧಾನಿ ಬೆಂಗಳೂರು ನಗರದ ಹಲಸೂರಿನಲ್ಲಿ ಬುಧವಾರ ಅಣಕು ಕವಾಯತು ಹಾಗೂ ನಾಗರಿಕರಿಗೆ ತುರ್ತು ಪರಿಸ್ಥಿತಿ ಎದುರಿಸುವ ಜಾಗೃತಿ ಕಾರ್ಯಾಚರಣೆಯಾದ ‘ಆಪರೇಷನ್ ಅಭ್ಯಾಸ್' ಯಶಸ್ವಿಯಾಗಿ ನಡೆಯಿತು.

ಈ ವೇಳೆಯಲ್ಲಿ ಕಾಲ್ಪನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿ ನಾಗರಿಕರ ರಕ್ಷಣೆ, ಅಗ್ನಿಶಮನ ಹಾಗೂ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ ಪ್ರಕಾರದ ಅಣಕು ಪ್ರದರ್ಶನ ಮಾಡಲಾಯಿತು.

ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತವಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಗಳು ಪ್ರದರ್ಶಿಸಿದರು.

ಈ ಜಾಗೃತಿ ಕಾರ್ಯಾಚರಣೆಯನ್ನು ವೀಕ್ಷಿಸಿದ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಕ್ಷಣಾ ಇಲಾಖೆಯು ಮೇ6ರ ಮಧ್ಯರಾತ್ರಿ ಪಾಕಿಸ್ತಾನದಲ್ಲಿನ ಉಗ್ರಗಾಮಿ ನೆಲೆಗಳ ಮೇಲೆ 9 ಕಡೆ ದಾಳಿ ನಡೆಸಿದೆ. ಆದರೆ, ಎಲ್ಲೋ ಒಂದು ಕಡೆ ಯುದ್ಧದ ಛಾಯೆ ಇಡೀ ಭಾರತದಲ್ಲಿ ಆವರಿಸಿದೆ. ಭಾರತ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಬಹುದು ಅಥವಾ ಪಾಕಿಸ್ತಾನ ಭಾರತದ ಮೇಲೆ ಯುದ್ಧಕ್ಕೆ ಬರಬಹುದು ಎಂಬ ಛಾಯೆ ಮೂಡಿದೆ. ಇದಕ್ಕೆ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕಿದೆ ಎಂದರು.

ನಾಗರಿಕರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಸಾರ್ವಜನಿಕರ ಜವಾಬ್ದಾರಿಗಳೇನು, ಈ ಗೊಂದಲದ ಸಂದರ್ಭದಲ್ಲಿ ಶಾಂತಿ ಪಾಲನೆ ಮಾಡುವುದು ಹೇಗೆ? ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ‘ಆಪರೇಷನ್ ಅಭ್ಯಾಸ್’ ಮೂಲಕ ಸಿವಿಲ್ ಡಿಫೆನ್ಸ್‌ನಲ್ಲಿ ತೊಡಗಿಸಿಕೊಂಡಿರುವವರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿ.ಪರಮೇಶ್ವರ್ ಹೇಳಿದರು.

ದೇಶದ ರಕ್ಷಣೆಯ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. 1972ರಲ್ಲಿ ಇಂತಹದ್ದೇ ಸಂದರ್ಭ ಎದುರಾಗಿತ್ತು. ಆಗ ದೇಶದಲ್ಲಿ ಆಗಿರುವ ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಅಂತದ್ದೆ ಸಂದರ್ಭ ನಮಗೆ ಈಗ ಬಂದಿದೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಘಟನೆ ಪ್ರತಿಯೊಬ್ಬ ಭಾರತೀಯನಿಗೆ ನೋವನ್ನುಂಟು ಮಾಡಿದೆ. ಅಮಾಯಕ ಜನರು, ಮಕ್ಕಳ ಮೇಲೆ ಹತ್ಯೆ ಮಾಡಿರುವುದನ್ನು ಜ್ಞಾಪಿಸಿಕೊಂಡರೆ ನೋವಾಗುತ್ತದೆ ಎಂದು ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.

ಯುದ್ಧಗಳ ಸಂದರ್ಭದಲ್ಲಿ ಯಾವ ಊರಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಅಂತಹ ಸಂದರ್ಭ ಬರಬಾರದು. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೂ ಈ ಮಾಹಿತಿ ನೀಡಬೇಕಾಗುತ್ತದೆ. ಅಗ್ನಿಶಾಮಕ ಮತ್ತು ತುರ್ತುಸೇವೆ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಜಾಗೃತಿಯನ್ನು ಮೂಡಿಸಬೇಕು ಎಂದು ಜಿ.ಪರಮೇಶ್ವರ್ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸಂಸದ ಡಾ.ಕೆ.ಸುಧಾಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಗೃಹ ಇಲಾಖೆಯ ಕಾರ್ಯದರ್ಶಿ ಎಸ್.ರವಿ, ಡಿಐಜಿ ರವಿ.ಡಿ.ಚನ್ನಣ್ಣನವರ್ ಸೇರಿದಂತೆ ಮುಂತಾದ ಅಧಿಕಾರಿಗಳು ಇದ್ದರು.

ರಾಯಚೂರು, ಕಾರವಾರ, ಬೆಂಗಳೂರಿಗೆ ತೀವ್ರ ನಿಗಾ :

ರಾಯಚೂರಿನಲ್ಲಿ ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ವಿದ್ಯುತ್ ಉತ್ಪಾದನಾ ಘಟಕ, ಕಾರವಾರದಲ್ಲಿ ಅಣುಸ್ಥಾವರ ಮತ್ತು ಇಡೀ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚು ತೆರಿಗೆ ನೀಡುವ ಶಕ್ತಿ ಬೆಂಗಳೂರಿಗೆ ತೀವ್ರ ನಿಗಾವಹಿಸಿ ಭದ್ರತೆಯನ್ನು ಒದಗಿಸಲಾಗಿದೆ. ಇಂತಹ ಪ್ರಮುಖ ಸ್ಥಳಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಆಧರಿಸಿ ಗುರುತಿಸಲಾಗಿದೆ. ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವು ಬಹಳ ಮುಖ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಚುರುಕಾಗಿ ಮಾಡಬೇಕು ಎಂದು ಜಿ.ಪರಮೇಶ್ವರ್ ಹೇಳಿದರು.

ಇಸ್ರೋ, ಡಿಆರ್‍ಡಿಒ, ಎಚ್‍ಎಎಲ್‍ನಲ್ಲಿ ‘ಕೇಂದ್ರ’ ಭದ್ರತೆ..!

ಬೆಂಗಳೂರಿನಲ್ಲಿರುವ ಇಸ್ರೋ, ಡಿಆರ್‍ಡಿಒ, ಎಚ್‍ಎಎಲ್ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಕೇಂದ್ರ ಸರಕಾರ ಭದ್ರತೆಯನ್ನು ಹೆಚ್ಚಿಸಿದೆ. ಈ ಸ್ಥಳಗಳಲ್ಲಿನ ಭದ್ರತೆಯನ್ನು ಕೇಂದ್ರ ಸರಕಾರ ನೇರವಾಗಿ ನಿರ್ವಹಣೆ ಮಾಡುತ್ತದೆ. ಪಹಲ್ಗಾಮ್ ದಾಳಿ ಬಳಿಕ ಸಹಜವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇಂತಹ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನ 32 ಕಡೆ 2 ನಿಮಿಷಗಳ ಕಾಲ ಸೈರನ್..!

ಪಾಕಿಸ್ತಾನ ಜೊತೆಗಿನ ಉದ್ವಿಗ್ನತೆ ಮಧ್ಯೆ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಜಧಾನಿ ಬೆಂಗಳೂರಿನ 32 ಕಡೆಗಳಲ್ಲಿ ಬುಧವಾರದಂದು ಸಂಜೆ 3.58ರಿಂದ 4ಗಂಟೆಯವರೆಗೆ ಯುದ್ಧದ ಎಚ್ಚರಿಕೆಯ ಸೈರನ್ ಮೊಳಗಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News