ಸದನದಲ್ಲಿ ಅಕ್ಕ-ಪಕ್ಕ ಕೂತು ಗಮನಸೆಳೆದ ಸಿಎಂ, ಮಾಜಿ ಸಿಎಂ

Update: 2026-08-21 17:48 IST

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಒಟ್ಟಿಗೆ ಅಕ್ಕ-ಪಕ್ಕದಲ್ಲಿ ಕೂತು ಗಮನ ಸೆಳೆದಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಕಲಾಪ ಮುಂದೂಡಿಕೆಯಾದ ಬಳಿಕ ಉಭಯ ನಾಯಕರು ಒಟ್ಟಿಗೆ ಕೂತು ಸಮಾಲೋಚನೆ ನಡೆಸಿದ್ದಾರೆ. ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಅಪರೂಪದ ಘಟನೆಯೂ ನಡೆದಿದೆ.

ಉಭಯ ನಾಯಕರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದ ವೇಳೆ ಆಗ ಆಡಳಿತ ಪಕ್ಷದ ಕೆಲವು ಶಾಸಕರು ಅವರನ್ನು ಸುತ್ತುವರಿದಿದ್ದರು. 

ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಭಾಗವಹಿಸಿದ್ದರು. ಆದರೆ, ಇಬ್ಬರೂ ಜೊತೆಯಲ್ಲಿ ಹೋಗಿ, ಜೊತೆಯಲ್ಲೇ ಬರಲಿಲ್ಲ. ಪ್ರತ್ಯೇಕವಾಗಿ ಸಭೆಗೆ ಹೋಗಿ ಪ್ರತ್ಯೇಕವಾಗಿಯೇ ಇಬ್ಬರೂ ಬೆಂಗಳೂರಿಗೆ ಹಿಂದಿರುದ್ದರು.

ಅಲ್ಲದೆ, ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಸಿದ್ದರಾಮಯ್ಯ ಗೈರು ಹಾಜರಾಗಿದ್ದರು. ಹೀಗಾಗಿ ಇಬ್ಬರ ನಡುವೆ ಅಸಮಾಧಾನವಿದೆ ಎಂಬ ವದಂತಿಗಳು ಕೇಳಿಬಂದಿದ್ದವು. ವಿಧಾನ ಮಂಡಲ ಅಧಿವೇಶನ ಪ್ರಾರಂಭವಾದ ಮೊದಲ ದಿನ ಗೈರು ಹಾಜರಾಗಿದ್ದ ಸಿದ್ದರಾಮಯ್ಯ, ಎರಡನೇ ದಿನ ಸದನಕ್ಕೆ ಆಗಮಿಸಿದ್ದರು. ಅನಂತರ ಸದನದ ಕಾರ್ಯ ಕಲಾಪಗಳಿಂದಲೂ ದೂರವೇ ಉಳಿದಿದ್ದರು.

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ವೇಳೆ ಸದನದಲ್ಲಿದ್ದರೂ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News