ʼದಸರಾʼ ಆನೆಗಳ ಪಟ್ಟಿ ಬಿಡುಗಡೆ : 12 ಆನೆಗಳಿಗಷ್ಟೇ ಅವಕಾಶ

6 ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಯಸ್ಸಿನ ಕಾರಣಕ್ಕೆ ವಿಶ್ರಾಂತಿ

Update: 2026-08-18 19:37 IST

ಮೈಸೂರು : ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಜಪಡೆಯ ಪಟ್ಟಿ ಬಿಡುಗಡೆಯಾಗಿದೆ. ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಯನ್ನು ವಯಸ್ಸಿನ ಕಾರಣಕ್ಕೆ ದಸರಾದಿಂದ ಕೈಬಿಡಲಾಗಿದೆ.

ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಲ್ಲಿನ ಸಾಕಾನೆ ಶಿಬಿರಗಳಿಗೆ ಭೇಟಿ ನೀಡಿ, ಎಲ್ಲಾ ಆನೆಗಳ ಸ್ವಭಾವ ಮತ್ತು ಸಾಮರ್ಥ್ಯ ಪರೀಕ್ಷಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮವಾಗಿ 12 ಆನೆಗಳ ಪಟ್ಟಿ ಸಿದ್ಧಪಡಿಸಿದ್ದು, ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಪಟ್ಟಿಯನ್ನು ಮಂಗಳವಾರ ಬೆಂಗಳೂರಲ್ಲಿ ಬಿಡುಗಡೆ ಮಾಡಿದರು.

ಪಟ್ಟಿಯಲ್ಲಿರುವ ಆನೆಗಳು: ದುಬಾರೆಯ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ ಹಾಗೂ ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ, ಮತ್ತಿಗೋಡಿನ ಏಕಲವ್ಯ, ಶ್ರೀಕಂಠ ಮತ್ತು ದೊಡ್ಡಹರವೆ ರೂಪಾ, ರಾಮಾಪುರದ ಚೈತ್ರ ಆನೆಗಳನ್ನು ದಸರಾಗೆ ಕರೆತರಲು ನಿರ್ಧರಿಸಲಾಗಿದೆ.

12 ಆನೆಗಳಿಗಷ್ಟೇ ಅವಕಾಶ: ಕಳೆದ ಆರೇಳು ವರ್ಷಗಳಿಂದ ದಸರಾ ಉತ್ಸವಗಳಲ್ಲಿ 14 ಆನೆಗಳನ್ನು ಕರೆತರಲಾಗಿತ್ತು. ಆದರೆ, ಈ ಬಾರಿಯ ದಸರಾಗೆ 12 ಆನೆಗಳನ್ನು ಕರೆತರಲಾಗುತ್ತಿದ್ದು, ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಸಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಲಕ್ಷ್ಮೀ, ಕಾವೇರಿ ಆನೆಯನ್ನು ಗಜಪಯಣ ಮೂಲಕ ಕರೆತರಲಾಗುತ್ತದೆ. ನಂತರ ಎರಡನೇ ತಂಡದಲ್ಲಿ ಶ್ರೀಕಂಠ, ರೂಪಾ, ಚೈತ್ರಾ ಆನೆಯನ್ನು ತರಲು ನಿರ್ಧರಿಸಲಾಗಿದೆ. ಮತ್ತಿಗೋಡಿನ ಭೀಮ ಮತ್ತು ದುಬಾರೆಯ ಹರ್ಷನನ್ನು ಮೀಸಲು ಆನೆಗಳಗಿ ಇರಿಸಿಕೊಳ್ಳಲಾಗಿದೆ.

ಮದದಲ್ಲಿರುವ ಭೀಮ: ಜನ ಮೆಚ್ಚಿದ ಆನೆ ಭೀಮನಿಗೆ ಮದ ಇರುವುದರಿಂದ ಈ ಬಾರಿಯ ದಸರಾಗೆ ಕರೆತರಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಆದರೂ ಮೀಸಲು ಆನೆಯಾಗಿ ಇರಿಸಿಕೊಂಡಿದ್ದಾರೆ.

ಆನೆ - ವಯಸ್ಸು - ಸಾಕಾನೆ ಶಿಬಿರ

ಧನಂಜಯ -45- ದುಬಾರೆ (ಮಡಿಕೇರಿ)

ಮಹೇಂದ್ರ - 42 - ಬಳ್ಳೇ (ನಾಗರಹೊಳೆ)

ಏಕಲವ್ಯ - 41 - ಮತ್ತಿಗೋಡು (ನಾಗರಹೊಳೆ)

ಪ್ರಶಾಂತ - 54 - ದುಬಾರೆ (ಮಡಿಕೇರಿ)

ಗೋಪಿ - 43 - ದುಬಾರೆ (ಮಡಿಕೇರಿ)

ಶ್ರೀರಾಮ - 41 - ದುಬಾರೆ (ಮಡಿಕೇರಿ)

ಸುಗ್ರೀವ - 44 - ದುಬಾರೆ (ಮಡಿಕೇರಿ)

ಲಕ್ಷ್ಮೀ - 54- ಬಳ್ಳೆ (ನಾಗರಹೊಳೆ)

ಕಾವೇರಿ -46 - ದುಬಾರೆ

ಎರಡನೇ ತಂಡದಲ್ಲಿ ಬರುವ ಆನೆಗಳು

ರೂಪಾ - 50- (ದೊಡ್ಡಹರವೆ)

ಚೈತ್ರಾ - 55- ರಾಮಪುರ (ಬಂಡೀಪುರ)

ಶ್ರೀಕಂಠ -57- ಮತ್ತಿಗೋಡು(ನಾಗರಹೊಳೆ)

ಮೀಸಲು ಆನೆಗಳು:

ಭೀಮ -26-ಮತ್ತಿಗೋಡು

ಹರ್ಷ-51-ದುಬಾರೆ

 26ರಂದು ಗಜಪಯಣಕ್ಕೆ ಚಾಲನೆ

 ಕಳೆದ ವಷದಂತೆ ಈ ವರ್ಷವೂ 11 ದಿನಗಳ ಕಾಲ ದಸರಾ ಉತ್ಸವ ನಡೆಯಲಿದ್ದು, ಇದಕ್ಕೆ ಎರಡು ತಿಂಗಳ ಮುಂಚಿತವಾಗಿಯೇ ಕಾಡಿನಿಂದ ಗಜಪಡೆಯನ್ನು ಮೈಸೂರಿಗೆ ಕರೆತರಲಾಗುತ್ತದೆ. ಅದರಂತೆ ಆ.26ರಂದು ಗಜಪಯಣಕ್ಕೆ ಚಾಲನೆ ಸಿಗಲಿದೆ. ಅಂದು ಮೊದಲ ಹಂತದ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News