ಮೈಸೂರು| ವಾಟ್ಸಾಪ್ಗೆ ಬಂದ ಮೆಸೇಜ್ಗೆ ಕ್ಲಿಕ್ ಮಾಡಿ 1.43 ಲಕ್ಷ ರೂ. ಕಳೆದುಕೊಂಡ ವ್ಯಾಪಾರಿ!
ಮೈಸೂರು,ಜ.2: ಕಬಾಬ್ ಅಂಗಡಿ ನಡೆಸುತ್ತಿದ್ದ ಸಣ್ಣ ವ್ಯಾಪಾರಿಯೋರ್ವನ ಯುಪಿಐ ಖಾತೆಗೆ ಕನ್ನ ಹಾಕಿರುವ ವಂಚಕರು ಆನ್ಲೈನ್ ಮೂಲಕ 1.43 ಲಕ್ಷ ರೂ. ವಂಚನೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿನಕಲ್ ಸುರೇಶ್ ವಂಚನೆಗೆ ಒಳಗಾದ ವ್ಯಾಪಾರಿ. ಕಳೆದ ಡಿಸೆಂಬರ್ 25ರಂದು ವಾಟ್ಸಾಪ್ ಖಾತೆಗೆ ಬಂದ ಮೆಸೇಜ್ಗೆ ಕ್ಲಿಕ್ ಮಾಡಿದಾಗ ಸುರೇಶ್ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.43 ಲಕ್ಷ ರೂ ಹಣ ಕಡಿತವಾಗಿದೆ.
ಈ ಬಗ್ಗೆ ಸುರೇಶ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಕೆ.ಎಂ.ಅನುರಾಜ್ ಪ್ರತಿಕ್ರಿಯಿಸಿ, ಬಹುತೇಕ ಸಣ್ಣ ವ್ಯಾಪಾರಿಗಳು ಅನಕ್ಷರಸ್ತರಾಗಿದ್ದು, ತಮಗೆ ಬರುವ ಮೆಸೇಜ್ ಬಗ್ಗೆ ಅವರಿಗೆ ನಿಖರ ಮಾಹಿತಿ ಇರುವುದಿಲ್ಲ. ವಂಚಕ ಮೊದಲು ಸುರೇಶ್ ಖಾತೆಗೆ ಒಂದು ರೂಪಾಯಿ ಕಳಿಸಿ ನಂತರ ಆಪ್ ಹಾಕಿ ಕ್ಲಿಕ್ ಮಾಡಲು ಹೇಳಿದ್ದಾನೆ. ಸುರೇಶ್ ಗೊತ್ತಾಗದೆ ಆ ಆಪ್ ಒತ್ತಿದ ತಕ್ಷಣ ಖಾತೆಯಲ್ಲಿದ್ದ ಹಣ ಮಾಯವಾಗಿದೆ. ಪೊಲೀಸರು ಆನ್ಲೈನ್ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ದಿಲ್ಲಿಯಲ್ಲಿ ಕುಳಿತ ವಂಚಕರು ಗ್ರಾಮೀಣ ಪ್ರದೇಶದ ಜನರಿಗೆ ಆಮೀಷಗಳನ್ನು ಒಡ್ಡಿ ಈ ರೀತಿ ವಂಚನೆ ಮಾಡುತ್ತಿದ್ದಾರೆ. ಸೂಕ್ತ ಪರಿಶೀಲನೆ ನಡೆಸಿ ಸುರೇಶ್ ಅವರಿಗೆ ಹಣವನ್ನು ವಾಪಸ್ ಕೊಡಿಸುವ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರಿಗೆ ಆನ್ಲೈನ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.