×
Ad

ಬೆಲೆ ಏರಿಕೆ ಬರೆ ಎಳೆದು ಸಾಧನಾ ಸಮಾವೇಶವೇ? : ಪ್ರಹ್ಲಾದ್‌ ಜೋಶಿ

Update: 2026-05-19 15:56 IST

ಹೊಸದಿಲ್ಲಿ : ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ ಎಳೆದು, ರಾಜ್ಯವನ್ನು ಅಭಿವೃದ್ಧಿ ಶೂನ್ಯಗೊಳಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸಾಧನಾ ಸಮಾವೇಶವೇ? ಎಂದು ಕೇಂದ್ರ  ಸಚಿವ ಪ್ರಹ್ಲಾದ್‌ ಜೋಶಿ ಟೀಕಿಸಿದ್ದಾರೆ.

ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಬೇಜವಾಬ್ದಾರಿ ಮತ್ತು ದಿವಾಳಿಕೋರ ಸರ್ಕಾರವೆಂಬ ಖ್ಯಾತಿಗೆ ಪಾತ್ರವಾಗಿರುವ ಕಾಂಗ್ರೆಸ್ ಸರ್ಕಾರ, ಈಗ ಜನರ ದುಡ್ಡಿನಲ್ಲಿ 'ಸಾಧನಾ ಸಮಾವೇಶ' ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಗ್ಯಾರೆಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದು ಬಳಿಕ ಒಂದೊಂದೇ ಅಗತ್ಯತೆಗಳ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಮೂರು ವರ್ಷ ಸವೆಸಿದ್ದು, ಜನರನ್ನು‌ ದುಸ್ಥಿತಿಗೆ ತಳ್ಳಿರುವುದು ಈ ಸರ್ಕಾರದ ಸಾಧನೆಯೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಜನತೆ, ರೈತರು ಮತ್ತು ಸಾರಿಗೆ ನೌಕರರು ಸಂಕಷ್ಟದಲ್ಲಿದ್ದರೆ, ಈ ಸರ್ಕಾರ ಮೂರನೇ ವರ್ಷದ ಸಾಧನಾ ಸಮಾವೇಶಕ್ಕೆ ಮುಂದಾಗಿದೆ. ಇದು ಯಾರ ಖುಷಿ ಮತ್ತು ಯಾರನ್ನು ಓಲೈಸಲು? ಎಂದಿರುವ ಸಚಿವರು, ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ ಎಂದು ದೂರಿದ್ದಾರೆ.

ಈಗಾಗಲೇ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಹದಗೆಡಿಸಿದೆ. ಜಾತಿಗಣತಿ ಕಾರ್ಯದಲ್ಲಿ ತೊಡಗಿದ್ದ ನೌಕರರಿಗೆ ಈವರೆಗೂ ಪೂರ್ತಿ ಹಣ ಪಾವತಿಸಿಲ್ಲ. ನ್ಯಾಯಯುತ ಸಂಬಳ ಮತ್ತು ಸೌಲಭ್ಯಗಳಿಲ್ಲದೆ ಸಾರಿಗೆ ನೌಕರರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಹೊಸ ಬಸ್ಸುಗಳಿಲ್ಲ, ಹೊಸ ರಸ್ತೆಗಳಿಲ್ಲ, ಆಸ್ಪತ್ರೆ-ಶಾಲೆಗಳಿಗೆ ಅನುದಾನವೂ ಇಲ್ಲ ಎಂದಿದ್ದಾರೆ.

ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಈ ಕಾಂಗ್ರೆಸ್ ಸರ್ಕಾರದ ನೀತಿಯಿಂದಾಗಿ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News