ಈ ಸರಕಾರ ಎಷ್ಟು ದಿನ ಇರಲಿದೆ ಎಂಬ ಪ್ರಶ್ನೆ ಇದೆ: ವಿಜಯೇಂದ್ರ
ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹನಿಮೂನ್ ಅವಧಿ ಇಲ್ಲ ಎಂಬುದೂ ಸತ್ಯ. ಯಾರು ಎಷ್ಟೇ ಬಲಶಾಲಿಯಾದರೂ ನಾವು ಪ್ರತಿಪಕ್ಷವಾಗಿ ಈ ಸರಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡುವ ಕೆಲಸವನ್ನು ಇನ್ನೂ ಹೆಚ್ಚು ಸಮರ್ಥವಾಗಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸವಾಲನ್ನು ಮೆಟ್ಟಿ ನಿಲುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ. ಈ ಸರಕಾರ ಎಷ್ಟು ದಿನ ಇರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಮುಂದೆ ಯಾವಾಗಲೇ ವಿಧಾನಸಭೆ ಚುನಾವಣೆ ನಡೆದರೂ ರಾಜ್ಯದಲ್ಲಿ ನಮ್ಮ ಸರಕಾರ ತರುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದು ತಿಳಿಸಿದರು.
ಎಲ್ಲರನ್ನೂ ಸಂಭಾಳಿಸಿಕೊಂಡು ಸರಿದೂಗಿಸಿಕೊಂಡು ಹೋಗುವ ಸವಾಲಿನಲ್ಲೇ ಡಿ.ಕೆ.ಶಿವಕುಮಾರ್ ಅವರು ಎರಡು ವರ್ಷಗಳನ್ನು ಕಳೆಯುವ ಕೆಲಸ ಆಗಲಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ತೆಗೆದುಕೊಂಡಿದ್ದು, ತಮ್ಮ ಜೀವನದ ಆಶೆಯನ್ನು ಪೂರೈಸಿಕೊಂಡಿದ್ದಾರೆ. ಅವರ ಸಂಪುಟದ ಸದಸ್ಯರ ಪಟ್ಟಿಯನ್ನು ನೋಡಿದಾಗ ಅದು ಡಿ.ಕೆ.ಶಿವಕುಮಾರ್ ಸಂಪುಟವಲ್ಲ, ಸಿದ್ದರಾಮಯ್ಯನವರ ಕ್ಯಾಬಿನೆಟ್ ಎಂಬುದು ಎಂತಹವರಿಗೂ ಗೊತ್ತಾಗುತ್ತದೆ ಎಂದು ನುಡಿದರು.
ಬಿಜೆಪಿ ರಾಜ್ಯಾಧ್ಯಕ್ಷನಾಗಿ ಸಂಘಟನೆ ಬಲಪಡಿಸುವೆ. ಮುಂದೆ ಬಿಜೆಪಿ ಸರಕಾರವನ್ನು ತರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತೇನೆ. ರಾಜ್ಯಸಭೆಯಲ್ಲಿ ನಮಗಿರುವುದು ಒಂದೇ ಸ್ಥಾನ, ನಮ್ಮ ರಾಜ್ಯದ ದೃಷ್ಟಿಯಿಂದ ರಾಜ್ಯಸಭೆಗೆ ಯಾರನ್ನು ಕಳುಹಿಸಿದರೆ ಲಾಭ ಆಗುತ್ತದೆ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.