×
Ad

ಕೋವಿಡ್ ಭ್ರಷ್ಟರ ಮಾಹಿತಿಯನ್ನು ಯತ್ನಾಳ್ ಬಿಜೆಪಿಯ ಕೇಂದ್ರ ನಾಯಕರಿಗೆ ನೀಡಿ ಪ್ರಯೋಜನವಿಲ್ಲ: ದಿನೇಶ್ ಗುಂಡೂರಾವ್

Update: 2024-01-10 11:39 IST

ಬೆಂಗಳೂರು : “ಕೋವಿಡ್ ನಲ್ಲಿ ಕಾಯಕ ಮರೆತು ಕಳಂಕದ ಕೆಲಸ ಮಾಡಿದ ಭ್ರಷ್ಟರ ಮಾಹಿತಿಯನ್ನ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೇಂದ್ರ ನಾಯಕರಿಗೆ ನೀಡಿದರೆ ಏನು ಪ್ರಯೋಜನ?” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ನಾಯಕರ ಸಹಕಾರವಿಲ್ಲದೇ 40 ಸಾವಿರ ಕೋಟಿ ಕೋವಿಡ್ ಭ್ರಷ್ಟಾಚಾರ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ನಡೆದಿರುತ್ತಾ ಎಂದು ಪ್ರಶ್ನಿಸಿದ್ದಾರೆ. “ಕೋವಿಡ್ ಭ್ರಷ್ಟಾಚಾರದ ಬಗ್ಗೆ ಬವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮಲ್ಲಿರುವ ಮಾಹಿತಿ, ದಾಖಲೆಗಳನ್ನು ಕೇಂದ್ರ ನಾಯಕರಿಗೆ ನೀಡುವ ಬದಲು ಜಸ್ಟಿಸ್ ಕುನ್ನಾ ಅವರ ತನಿಖಾ ಆಯೋಗಕ್ಕೆ ನೀಡಲಿ. ಬಸವೇಶ್ವರರ ಅನುಯಾಯಿ ಎಂದು ಹೇಳಿಕೊಳ್ಳುವ ಬಸವನಗೌಡ ಯತ್ನಾಳ್ ಅವರು ಅಂತರಂಗ ಶುದ್ದಿ ಬಹಿರಂಗ ಶುದ್ದಿ‌ ಎರಡನ್ನೂ ಪಾಲಿಸಬೇಕು. ನಾಲ್ಕು ಗೋಡೆಗಳ ಮಧ್ಯೆ ಕೇಂದ್ರ ನಾಯಕರಿಗಷ್ಟೇ ಮಾಹಿತಿ ನೀಡಿದ್ದೇನೆ ಎಂದರೆ, ಅದರಿಂದ ಪ್ರಯೋಜನವಿಲ್ಲ” ಎಂದು ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.

ಬಸವಣ್ಣನವರ ವಚನ ಪ್ರಸ್ತಾಪಿಸಿರುವ ಸಚಿವರು, “ಕೋವಿಡ್ ವೇಳೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಶ್ರೇಷ್ಠ ಸಂದೇಶವನ್ನ ಪಾಲಿಸಬೇಕಿತ್ತು. ಆದರೆ ಜನರ ಜೀವ ಉಳಿಸಲು ಹೋರಾಟ ನಡೆಯುತ್ತಿದ್ದಾಗ ಬರೀ ಕಳಂಕದ ಕೆಲಸದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News