×
Ad

ಕೋಡಿಯಲ್ಲಿ ಉಪ್ಪು ನೀರಿನ ಸಮಸ್ಯೆ, ಬಾವಿ ನೀರಿಗೂ ಸಂಕಷ್ಟ; ಶಾಶ್ವತ ಪರಿಹಾರಕ್ಕೆ ಜನರ ಆಗ್ರಹ

Update: 2026-05-07 19:26 IST

ಕುಂದಾಪುರ, ಮೇ 7: ಇಲ್ಲಿನ ಪುರಸಭೆ ವ್ಯಾಪ್ತಿಯ ಕೋಡಿ ಭಾಗದಲ್ಲಿ ಗದ್ದೆ, ಬಾವಿಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ಉಪ್ಪು ನೀರು ನುಗ್ಗುತ್ತಿದ್ದು, ಈ ಬಾರಿಯೂ ಇಲ್ಲಿನ ಜನರಿಗೆ ಉಪ್ಪು ನೀರಿನ ಸಮಸ್ಯೆ ತಪ್ಪಿಲ್ಲ.

ಕೋಡಿ ಹಾಗೂ ಆಸುಪಾಸಿನ ಭಾಗಗಳ ಗದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗುತ್ತಿದೆ. ಇದು ಆಸುಪಾಸಿನ ನೂರಾರು ಮನೆಗಳ ಬಾವಿಗಳಿಗೂ ಸಮಸ್ಯೆ ತಂದೊಡ್ಡಿದೆ. ಬಾವಿ ನೀರು ಸಹ ಸಂಪೂರ್ಣ ಉಪ್ಪು ನೀರಾಗಿದ್ದು, ಬಳಕೆಗೂ ಆಗದ ಪರಿಸ್ಥಿತಿಯಿದೆ. ಇಲ್ಲಿನ ಮನೆಗಳಿಗೆ ಈಗ ಪುರಸಭೆಯಿಂದ ನಳ್ಳಿ ಮೂಲಕ ಕೊಡುವ ನೀರೇ ಆಸರೆಯಾಗಿದೆ. ಮತ್ತೊಂದೆಡೆ ಸೊಳ್ಳೆ ಕಾಟದಿಂದ ಜನರು ಹೈರಾಣಾಗಿದ್ದಾರೆ.

ಉಪ್ಪು ನೀರು ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನಿಂತಿರುವುದರಿಂದ ಮುಂದಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಸಿದ್ದತೆ ಆರಂಭಿಸಲು ಹಿನ್ನಡೆಯಾಗಿದೆ. ಗದ್ದೆಗಳ ಸ್ವಚ್ಛತೆ, ಗೊಬ್ಬರ ಹಾಕುವುದು, ಸುಡುಮಣ್ಣು ಹಾಕುವ ಕಾರ್ಯಕ್ಕೆ ಇದರಿಂದ ತೊಂದರೆಯಾಗಿದೆ. ಈ ಉಪ್ಪು ನೀರಿನ ಸಮಸ್ಯೆಯಿಂದಾಗಿಯೇ ಈ ಭಾಗದ ಅನೇಕ ಮಂದಿ ರೈತರು ಎಕರೆ ಗಟ್ಟಲೆ ಗದ್ದೆಗಳನ್ನು ಹಡಿಲು ಬಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೋಡಿಯ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿರುವ ಗದ್ದೆಗಳು ಈಗ ಸಂಪೂರ್ಣ ಉಪ್ಪು ನೀರಿನಿಂದ ಜಲಾವೃತ ಗೊಂಡಿವೆ. ದಶಕಗಳಿಂದಲೂ ಪ್ರತೀ ವರ್ಷ ಇಲ್ಲಿನ ನಿವಾಸಿಗರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೋಡಿ ಚಕ್ರೇಶ್ವರಿ ದೇವಸ್ಥಾನದ ವಠಾರದಿಂದ ಸೋನ್ಸ್ ಶಾಲೆಯವರೆಗಿನ ನದಿ ಪಾತ್ರದ ಸುಮಾರು 25 ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ಈ ಉಪ್ಪು ನೀರಿನಿಂದ ಪ್ರತೀ ವರ್ಷ ಸಮಸ್ಯೆಯಾಗುತ್ತಿದೆ. 50 ಕ್ಕೂ ಮಿಕ್ಕಿ ರೈತರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

ನದಿ ಹಾಗೂ ಗದ್ದೆಗಳ ಮಧ್ಯೆ ವಿವಿಧೆಡೆ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಗಳು ಸರಿಯಿಲ್ಲದ ಕಾರಣದಿಂದ ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ. ಅದಕ್ಕಾಗಿ ಇಲ್ಲಿ ಶಾಶ್ವತ ಪರಿಹಾರವೆಂಬಂತೆ ನದಿ ದಂಡೆ ನಿರ್ಮಿಸಿ, ಉಪ್ಪು ನೀರು ಒಳಗೆ ಬರುವುದನ್ನು ತಡೆಯಬಹುದು ಎಂದು ಈ ಭಾಗದ ನಿವಾಸಿಗಳು ಆಗ್ರಹಿಸುತಿದ್ದಾರೆ.

ಪುರಸಭೆಯ ಸ್ಪಂದನೆಯಿಲ್ಲ

‘ಸತತವಾಗಿ 11 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಕಳೆದ ವರ್ಷ ನಾವು ಈ ಉಪ್ಪು ನೀರಿನ ಸಮಸ್ಯೆ ವಿಚಾರದಲ್ಲಿ ಪುರಸಭೆ ಕಚೇರಿ ಎದುರು ಕೊಡದಲ್ಲಿ ಉಪ್ಪು ನೀರನ್ನು ಕೊಂಡೊಯ್ದು ಪ್ರತಿಭಟನೆ ನಡೆಸಿದ್ದೆವು. ಆಗ ಸೂಕ್ತ ಕ್ರಮಕೈಗೊಳ್ಳುವುದಾಗಿ ಪುರಸಭೆ ಆಶ್ವಾಸನೆ ನೀಡಿದ್ದು ಇನ್ನೂ ಯಾವುದೇ ಪರಿಹಾರ ಕಲ್ಪಿಸಿಲ್ಲ. ಈಗ ಉಪ್ಪು ನೀರು ನುಗ್ಗಿರುವ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಸ್ಪಂದನೆಯಿಲ್ಲ. ಕಾಮಗಾರಿ ನಡೆ ಸಲು ಪುರಸಭೆಗೆ ಅನುದಾನ ಕೊರತೆಯಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡುವ ಇಚ್ಚಾಶಕ್ತಿ ತೋರಬಹುದಿತ್ತು. ಕರಾವಳಿ ಯಲ್ಲಿ ಪ್ರವಾಸೋದ್ಯಮದ ಕೇಂದ್ರವಾಗಿರುವ ಕೋಡಿ ಪ್ರದೇಶ ಕುಂದಾಪುರ ಪುರಸಭೆ ವ್ಯಾಪ್ತಿಗೆ ಬರುತ್ತದೋ ಎಂಬ ಜಿಜ್ಞಾಸೆ ಮೂಡುವಂತಾಗಿದೆ. ಸರಕಾರ, ಪುರಸಭೆ ನಮ್ಮ ಕಷ್ಟಕ್ಕೆ ಸ್ಪಂದಿಸು ತ್ತಿಲ್ಲ. ನಮ್ಮ ಹಣದಲ್ಲೇ ನಾವು ತಾತ್ಕಾಲಿಕ ಕೆಲಸ ಮಾಡಿಕೊಂಡು ನಿತ್ಯದ ಸಮಸ್ಯೆ ಪರಿಹಾರ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.

-ಅಶೋಕ ಪೂಜಾರಿ ಕೋಡಿ, ಸ್ಥಳೀಯ ನಿವಾಸಿ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News