ಬೈಂದೂರು: ನೆಲಕಚ್ಚಿದ ಕೋಳಿ ಫಾರಂ
ಕುಂದಾಪುರ, ಮೇ 18: ಬೈಂದೂರು ತಾಲೂಕಿನ ವಿವಿದೆಡೆ ಶನಿವಾರ ಹಾಗೂ ರವಿವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ.
ಯಡ್ತರೆ ಗ್ರಾಮದ ಹೊಸೂರು ಎಂಬಲ್ಲಿರುವ ಪ್ರದೀಪ್ ಎನ್ನುವವರ ಕೋಳಿ ಫಾರಂ ಸಂಪೂರ್ಣ ಧರಾಶಾಹಿಯಾಗಿದ್ದು, ಎಂಟು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಇದರಿಂದ ಫಾರಂನಲ್ಲಿದ್ದ ಐನೂರಕ್ಕೂ ಅಧಿಕ ಕೋಳಿ ಸಾವನ್ನಪಿವೆ.
ಗಾಳಿ-ಮಳೆಯೊಂದಿಗೆ ಸಿಡಿಲು ಸಹ ಬಡಿದಿದ್ದು ತಗ್ಗರ್ಸೆ, ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ಅಪಾರ ಪ್ರಮಾಣದ ವಿದ್ಯುತ್ ಸಲಕರಣೆ, ವಿದ್ಯುತ್ ಬೇಲಿಗಳು ಮಿಂಚಿನ ಹೊಡೆತದಿಂದಾಗಿ ಸುಟ್ಟು ಹೋಗಿವೆ.
ಶಿರೂರು ಗ್ರಾಮದ ಕೋಟೆಮನೆ ನಿವಾಸಿ ಸರಸ್ವತಿ ಗಣಪತಿ ಮೇಸ್ತ ಇವರ ಮನೆಯ ಮೇಲೆ ಹಲಸಿನ ಮರ ಬಿದ್ದು ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.ಅಪಾರ ಪ್ರಮಾಣದಲ್ಲಿ ಅಡಿಕೆ,ಬಾಳೆ,ಕೃಷಿ ಗಿಡಗಳು ನೆಲಕ್ಕುರುಳಿದೆ. ಹಾನಿಯಾದ ಸ್ಥಳಕ್ಕೆ ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.