ಡಾ.ಚಂದ್ರಶೇಖರ ದಾಮ್ಲೆಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ
Update: 2026-05-27 21:14 IST
ಉಡುಪಿ, ಮೇ 27: ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ, ಪ್ರಸಂಗ ಕರ್ತ, ಕಲಾ ವಿಮರ್ಶಕ, ಅರ್ಥಧಾರಿ, ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ಮೂಲಕ ನಿರಂತರ ಯಕ್ಷಗಾನ ಸಂಬಂಧಿ ಕಾರ್ಯಕ್ರಮ ನಡೆಸಿಕೊಂಡು ಬಂದಿರುವ ಹಿರಿಯ ವಿದ್ವಾಂಸ ಡಾ. ಚಂದ್ರಶೇಖರ ದಾಮ್ಲೆ ಆಯ್ಕೆಯಾಗಿದ್ದಾರೆ.
ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ಈ ಪ್ರಶಸ್ತಿಯು 60,000ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 5ರ ಶುಕ್ರವಾರ ಸಂಜೆ 4:00 ಗಂಟೆಗೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.