×
Ad

ಸಾರ್ವಜನಿಕರು ನೀಡಿದ ಮಾಹಿತಿ: ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ಬಂಧನ

Update: 2026-06-11 21:45 IST

ಉಡುಪಿ, ಜೂ.11: ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೋಕಾ ಕಾಯ್ದೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿದ್ದ ಇಬ್ಬರನ್ನು ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಚೇತನ್ ಅಲಿಯಾಸ್ ಚೇತು ಪಡೀಲ್ ಹಾಗೂ ಮನೋಜ್ ಕುಲಾಲ್ ಅಲಿಯಾಸ್ ಮನೋಜ್ ಕೋಡಿಕೆರೆ ಎಂಬಿಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿಕೊಂಡು ಸಾರ್ವಜನಿಕ ಪ್ರಕಟಣೆ ನೀಡಿದ್ದು, ಮಾಹಿತಿ ನೀಡಿದ ಬಾತ್ಮೀದಾರರಿಗೆ 50,000 ರೂ ನಗದು ಬಹುಮಾನ ಘೋಷಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿಗಳ ಕುರಿತು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಚೇತು ಪಡೀಲ್‌ನನ್ನು ಎಪ್ರಿಲ್ 30ರಂದು ಹಾಗೂ ಮನೋಜ್ ಕುಲಾಲ್‌ನನ್ನು ಜೂನ್ 11ರಂದು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಮನೋಜ್ ಕೋಡಿಕೆರೆ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣಗಳು ಸೇರಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 3 ಕೊಲೆ ಪ್ರಕರಣ, 5 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 10 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿವೆ.

ಆರೋಪಿ ಚೇತನ್ ವಿರುದ್ಧ ಉಡುಪಿ-2, ದಕ್ಷಿಣ ಕನ್ನಡ -2 ಮತ್ತು ಮಂಗಳೂರು ನಗರ-9 ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, 2 ಕೊಲೆ, 2 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 2 ಮಾದಕ ದ್ರವ್ಯ ಸೇವನೆ ಮತ್ತು 6 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರ ಮಾಹಿತಿ ತಿಳಿಸಿದೆ.

ಆರೋಪಿಗಳ ದಸ್ತಗಿರಿ ಬಗ್ಗೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ನಗದು ಹಣವನ್ನು ಪೊಲೀಸ್ ಇಲಾಖೆಯಿಂದ ನೀಡಲಾಗಿದೆ. ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟುವ ಮತ್ತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇದೇ ರೀತಿ ಮುಂದಕ್ಕೂ ಸಹ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News