ನಮ್ಮನ್ನು ಉಳಿಸಿಕೊಳ್ಳಲು ಗಿಡಗಳನ್ನು ಬೆಳೆಸೋಣ: ಕೇಶವ ಪೂಜಾರಿ
ಉಡುಪಿ, ಜು.11: ಇಂದು ನಾವು ಉಸಿರಾಡುವ ಆಮ್ಲಜನಕ ಮರ ಮಟ್ಟುಗಳಿಂದ ನಮಗೆ ಲಭ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಸರಾಸರಿ 6ರಿಂದ 7 ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ನಾವು ಇದನ್ನು ಆಲೋಚನೆ ಮಾಡದೆ ಅಭಿವೃದ್ಧಿಯ ಹೆಸರಲ್ಲಿ ಮರಮಟ್ಟುಗಳನ್ನು ಕಡಿದು ಹಾಕಿದರೆ ಮುಂದೊಂದು ದಿನ ನಮಗೆ ಆಮ್ಲಜನಕದ ಕೊರತೆಯಾಗುವಂತಹ ಸಂದರ್ಭ ಬಂದೀತು. ಹಾಗಾಗಿ ನಮ್ಮನ್ನು ನಾವು ಉಳಿಸಿ ಕೊಳ್ಳುವುದಕ್ಕಾ ದರೂ ಮರ ಗಿಡಗಳನ್ನು ನೆಟ್ಟು ರಕ್ಷಿಸ ಬೇಕು ಎಂದು ಉಡುಪಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಪರಿಸರವನ್ನು ನಾವು ರಕ್ಷಿಸುತ್ತೇವೆ ಎನ್ನುವುದಕ್ಕಿಂತ ನಾನು ರಕ್ಷಿಸುತ್ತೇನೆ ಎಂಬುವುದು ಮುಖ್ಯವಾಗುತ್ತದೆ. ನಾವು ಅಂದಾಗ ಜವಾಬ್ದಾರಿ ಹಂಚಿ ಹೋಗುತ್ತದೆ ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಾನು ಪರಿಸರವನ್ನು ರಕ್ಷಿಸುತ್ತೇನೆ ಎಂದು ನಿರ್ಧಾರವನ್ನು ಮಾಡ ಬೇಕು. ಒಂದು ಗಿಡವನ್ನು ನೆಟ್ಟು ನಾವು ಮೂರು ವರ್ಷಗಳ ಕಾಲ ಜಾಗ್ರತೆಯಿಂದ ಅದನ್ನು ಆರೈಕೆ ಮಾಡಿ ಬೆಳೆಸಿದರೆ, ಆ ಗಿಡ ಮರವಾಗಿ ನೂರು ವರ್ಷಗಳ ಕಾಲ ನಮ್ಮನ್ನು ಬೆಳೆಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಉಪ ಅರಣ್ಯಾಧಿಕಾರಿ ಮಹಮ್ಮದ್ ಜುನೈದ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಅನುರಾಧ ಪಿ.ಶೆಟ್ಟಿ, ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್.ಭಂಡಾರಿ, ಯು.ಪದ್ಮನಾಭ ಕಾಮತ್, ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್, ಕಾರ್ಯದರ್ಶಿ ಭಾಸ್ಕರ ಬಂಗೇರ, ಮಾಜಿ ಗ್ರಾಪಂ ಸದಸ್ಯರಾದ ನಿತಿನ್ ಜೆ. ಸಾಲ್ಯಾನ್, ಆಬಿದ್ ಆಲಿ, ಸದಸ್ಯರಾದ ಪ್ರೇಮ್ ಮಿನೇಜಸ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ಸುಮಾರು 150 ವಿದ್ಯಾರ್ಥಿಗಳಿಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು.
‘ದೇಶದಲ್ಲಿ ಶೇ.24 ಕಾಡು ಪ್ರದೇಶವಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ ದೊರಕುವಾಗ ಶೇ.44 ಕಾಡು ಪ್ರದೇಶವಿದ್ದು ಅದು ಈಗ 24ಕ್ಕೆ ಇಳಿದಿದೆ. ಈ ಅಸಮತೋಲನ ಹೋಗಲಾಡಿಸದಿದ್ದರೆ ಮುಂದೊಂದು ದಿನ ನಾವು ದುರಂತದತ್ತ ಸಾಗುತ್ತೇವೆ. ಕರ್ನಾಟಕದಲ್ಲಿ ಇರುವಂತಹ ಕಾಡು ಪ್ರದೇಶವು ಕೂಡ ಶೇ.20. ಅದು ಕೂಡ ನಮ್ಮ ಜನಸಂಖ್ಯೆಯ ಅನುಪಾತದಲ್ಲಿ ಕೊರತೆ ಉಂಟುಮಾಡುತ್ತದೆ’
-ಕೇಶವ ಪೂಜಾರಿ, ಗಸ್ತು ಅರಣ್ಯ ಪಾಲಕರು, ಉಡುಪಿ