ಕುಕ್ಕೆಹಳ್ಳಿ ಕೊರಗಜ್ಜ ಕ್ಷೇತ್ರದಿಂದ ಹೊಸ ಯಕ್ಷಗಾನ ಮೇಳ
ಉಡುಪಿ, ಜು.14: ತಾಲೂಕಿನ ಕುಕ್ಕೆಹಳ್ಳಿ ಈಶ್ವರನಗರದಲ್ಲಿರುವ ಸ್ವಾಮಿ ಕೊರಗಜ್ಜ ಕ್ಷೇತ್ರದಿಂದ ಈ ವರ್ಷದ ನವೆಂಬರ್ ತಿಂಗಳಿನಿಂದ ‘ಆದಿ ಮಾಯೆ ಮೂಕಾಂಬಿಕಾ ಸ್ವಾಮಿ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ಹೊಸ ಬಡಗುತಿಟ್ಟು ಯಕ್ಷಗಾನ ಮೇಳವೊಂದು ಪ್ರಾರಂಭಗೊಳ್ಳಲಿದೆ ಎಂದು ಮೇಳದ ಯಜಮಾನರಾದ ಕುಕ್ಕೆಹಳ್ಳಿ ಸ್ವಾಮಿ ಕೊರಗಜ್ಜ ದೈವಸ್ಥಾನದ ಡಾ.ಕೆ.ಕೃಷ್ಣ ಕುಲಾಲ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು 2019ರಲ್ಲಿ ಜೀರ್ಣೋದ್ದಾರ ಹಾಗೂ ಪುನಃ ಪ್ರತಿಷ್ಠಾಪನೆ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ಲಕ್ಷಾಂತರ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆಗಳನ್ನು ಸಲ್ಲಿಸುತ್ತಿದ್ದು ಕ್ಷೇತ್ರವು ಭಕ್ತರ ನಂಬಿಕೆಯ ಕೇಂದ್ರವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಆದಿ ಮಾಯೆ ಮೂಕಾಂಬಿಕಾ ದೇವಿ ಹಾಗೂ ಸ್ವಾಮಿ ಕೊರಗಜ್ಜ ದೈವದ ಅಪ್ಪಣೆಯಂತೆ 2004ರಲ್ಲಿ ಚಿಕ್ಕಮೇಳ ವನ್ನು ಆರಂಭಿಸಲಾಗಿತ್ತು. 2025ರಲ್ಲಿ ಎರಡು ಹಾಗೂ ಈ ವರ್ಷದಿಂದ ಮೂರು ಚಿಕ್ಕಮೇಳಗಳಿವೆ. ಇದೀಗ ಕೊರಗಜ್ಜ ದೈವದ ಸೂಚನೆಯಂತೆ ಕ್ಷೇತ್ರದಿಂದ ಪೂರ್ಣರೂಪದ ಬಡಗುತಿಟ್ಟು ಯಕ್ಷಗಾನ ಮೇಳ ಸ್ಥಾಪನೆಯಾಗು ತಿದ್ದು ನವೆಂಬರ್ ತಿಂಗಳ ಎರಡನೇ ವಾರದಿಂದ ತನ್ನ ತಿರುಗಾಟ ಆರಂಭಿಸಲಿದೆ ಎಂದರು.
ಹೊಸ ಮೇಳದಲ್ಲಿ ಬಡಗುತಿಟ್ಟು ಹಾಗೂ ತೆಂಕುತಿಟ್ಟಿನ ಯಕ್ಷಗಾನದ ಅನುಭವಿ ಕಲಾವಿದರ ಸಮ್ಮಿಲನ ಇರಲಿದೆ. ನುರಿತ ಹಾಗೂ ಅನುಭವಿ ಕಲಾವಿದರು, ಹೊಸ ವೇಷಭೂಷಣ, ಆಕರ್ಷಕ ರಂಗಸಜ್ಜಿಕೆ, ಪ್ರಸಿದ್ಧ ಹಿಮ್ಮೇಳದೊಂದಿಗೆ ಕ್ಷೇತ್ರದ ಮಹಿಮೆಯನ್ನು ಸಾರುವ ಪ್ರಸಂಗಗಳ ಜತೆಗೆ ಪೌರಾಣಿಕ ಹಾಗೂ ಸಾಮಾಜಿಕ ಕಥಾ ಪ್ರಸಂಗಗಳನ್ನು ಪ್ರದರ್ಶಿಸಲಾಗುವುದು ಎಂದು ಡಾ.ಕುಲಾಲ್ ತಿಳಿಸಿದರು.
ಇದು ಬಯಲಾಟ ಮೇಳವಾಗಿದ್ದು, 33 ಮಂದಿ ಕಲಾವಿದರು ಹಾಗೂ ಇತರ ಸಿಬ್ಬಂದಿಗಳು ಇದರಲ್ಲಿದ್ದಾರೆ. ನವೆಂಬರ್ ಬಳಿಕ ಮಳೆಗಾಲ ಪ್ರಾರಂಭದವರೆಗೆ 180 ಆಟ ಆಡಲಿದ್ದೇವೆ. ಈಗಾಗಲೇ ಸಾಕಷ್ಟು ಹರಕೆ ಆಟಗಳು ಬುಕ್ ಆಗಿವೆ. ನಾವು ರಾತ್ರಿ 7 ರಿಂದ ಬೆಳಗಿನ ಜಾವ 1:30ರವರೆಗೆ ಕಾಲಮಿತಿಯಲ್ಲಿ ಆಟ ಪ್ರದರ್ಶಿಸುತ್ತೇವೆ. ಹರಕೆಯವರು ಅಪೇಕ್ಷಿಸಿದರೆ ಬೆಳಗಿನವರೆಗೂ ಆಟ ಆಡಲು ಸಿದ್ಧರಿದ್ದೇವೆ.
ಕೊರಗಜ್ಜ ಕ್ಷೇತ್ರ ಮಹಾತ್ಮೆಯೊಂದಿಗೆ ದೇವದಾಸ್ ಈಶ್ವರ ಮಂಗಲ ಅವರು ಬರೆದ ‘ವೈಭವ ಸೂರ್ಯವಂಶಿ’ ವಿನೂತನ ಹೊಸ ಪ್ರಸಂಗವನ್ನು ಪ್ರದರ್ಶಿಸಲಿದ್ದೇವೆ. ನಮ್ಮ ಕಲಾವಿದರು ನಮ್ಮ ಮೇಳದ ಪ್ರದರ್ಶನ ಮುಗಿದ ಬಳಿಕ ಬೇರೆ ಮೇಳದಲ್ಲಿ ಪಾತ್ರ ವಹಿಸಲು ಬಯಸಿದರೆ ನಾವು ಅಪೇಕ್ಷಿಸುವುದಿಲ್ಲ ಎಂದರು. ಕ್ಷೇತ್ರದ ಭಕ್ತರು ಹಾಗೂ ಯಕ್ಷಗಾನ ಕಲಾಪ್ರೇಮಿ ಗಳು ತಮ್ಮ ಊರುಗಳಲ್ಲಿ ಮೇಳದ ಪ್ರದರ್ಶನಗಳನ್ನು ಆಯೋಜಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮೇಳದ ಪ್ರಬಂಧಕ, ಮೇಳದ ಹಾಸ್ಯ ಕಲಾವಿದ ಅರುಣ್ಕುಮಾರ್ ಜಾರ್ಕಳ, ಭಾಗವತರಾದ ಆರ್ಡಿ ಸಂತೋಷ ಕುಮಾರ್, ಮದ್ದಲೆ ಕಲಾವಿದ ಶಶಿಕುಮಾರ್ ಆಚಾರ್ಯ ಬೆಳ್ಕಲೆ, ದೇವದಾಸ್ ಈಶ್ವರ ಮಂಗಲ ಉಪಸ್ಥಿತರಿದ್ದರು.