ಬಾಯ್ದೆರೆದ ಮೃತ್ಯುಕೂಪಗಳು; ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ಕುಂದಾಪುರ, ಆ.1: ಪ್ರತಿ ಮಳೆಗಾಲದಲ್ಲಿ ತುಂಬುವ ಕೆರೆ, ಮದಗ, ಹೊಳೆಸಾಲು, ಕಾಲುಸಂಕ, ಸಣ್ಣಹೊಳೆಗಳಲ್ಲಿ ಸಂಭವಿಸುತ್ತಿರುವ ಅಪಾಯದ ಬಗ್ಗೆ ಸಾರ್ವಜನಿಕರು ಸೂಕ್ತ ಮುಂಜಾಗ್ರತೆ ವಹಿಸಬೇಕಾಗಿದ್ದು, ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತೆಗೆ ತಾಲೂಕು ಆಡಳಿತ ಸಂಬಂಧಿತ ಅಧೀನ ಇಲಾಖೆಗೆ ಸೂಚನೆ ಯನ್ನು ಹೊರಡಿಸಿದೆ. ಆದರೂ ಕೆಲವೊಂದು ಅಪಾಯಕಾರಿ ಪ್ರದೇಶಗಳಲ್ಲಿ ಇನ್ನೂ ಅಸುರಕ್ಷತೆ ಇದ್ದು, ಸ್ಥಳೀಯರಲ್ಲಿ ಜೀವಭಯ ಕಾಡುತ್ತಿದೆ.
2012ರ ಜುಲೈನಲ್ಲಿ ನಾಲ್ಕು ಅಮಾಯಕ ಮಕ್ಕಳ ಬಲಿ ತೆಗೆದುಕೊಂಡ ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಬಾಚಿನ ಕೊಡ್ಡು ಮದಗ ಈವರೆಗೂ ಸುರಕ್ಷತೆ ಕಂಡುಕೊಂಡಿಲ್ಲ. ಮಳೆಗಾಲದಲ್ಲಿ ತುಂಬುವ ಕಲ್ಲುಕೋರೆ ಹೊಂಡ, ಮದಗ, ಕೆರೆ, ಹಳ್ಳ ಅಪಾಯಕಾರಿಯಾಗುತ್ತಿವೆ. ಇಂತಹ ಅಪಾಯಕಾರಿ ಪ್ರದೇಶಗಳ ಸುತ್ತ ತಡೆಬೇಲಿ ರಚಿಸಬೇಕೆಂಬ ಕೂಗಿಗೆ ಇನ್ನು ಸಹ ಸ್ಪಂದನೆ ಸಿಕ್ಕಿಲ್ಲ.
ದುರಂತಕ್ಕೆ ಕೊನೆ ಎಂದು?: 2011ರಲ್ಲಿ ಆಲೂರು ಗ್ರಾಮದಲ್ಲಿ ಪ್ರಕಾಶ್, 2012ರಲ್ಲಿ ಬೇಳೂರು ಗ್ರಾಮದ ಸಂಧ್ಯಾ ಮತ್ತು ಧನಲಕ್ಷ್ಮೀ, ಉಡುಪಿ ತಾಲೂಕು ಸಾಬ್ರಕಟ್ಟೆಯ ಅಕ್ಷಯ ಕುಮಾರ್, ಹಟ್ಟಿಯಂಗಡಿ ಬಾಚಿನಕೊಡ್ಲು ಎಂಬಲ್ಲಿ ನಯನ, ಪವಿತ್ರ, ನವೀನ ಮತ್ತು ಪವನ್, ಕಾಲ್ತೋಡು ಗ್ರಾಮದ ಸಂದೇಶ, 2013ರಲ್ಲಿ ಕಾಳಾವರ ಗ್ರಾಮದಲ್ಲಿ ಜಗದೀಶ್, 2014ರಲ್ಲಿ ಉಳ್ಳೂರು 11 ಗ್ರಾಮದ ಅಭಿಷೇಕ್, 2015ರಲ್ಲಿ ಹಟ್ಟಿಯಂಗಡಿ ಗ್ರಾಮದ ಕೆಂಚನೂರು ರಜಿತ್, ಮಾರಣಕಟ್ಟೆಯ ವಿಸ್ಮಯ, 2016ರಲ್ಲಿ ಸಾಬ್ರಕಟ್ಟೆಯ ಚಂದ್ರಿಕಾ ಮತ್ತು ಲಿಖಿತಾ, ಉಳ್ಳೂರು -74 ಗ್ರಾಮದ ಯೋಗೀಶ್, ಪ್ರಕಾಶ್ ಮತ್ತು ಅವರ ತಂದೆ ರಾಘವೇಂದ್ರ ಎಂಬವರು ಇಂತಹ ಅಪಾಯಕಾರಿ ಹೊಂಡ, ಮದಗ, ತೋಡಿಗೆ ಬಿದ್ದು ಪ್ರಾಣ ಕಳೆದುಕೊಂಡವರು.
2017ರಲ್ಲಿ ಬೇಳೂರಿನ ತಾಯಿ ಮತ್ತು ಇಬ್ಬರು ಮಕ್ಕಳು, ಆವರ್ಸೆಯಲ್ಲಿ ಯುವಕರಿಬ್ಬರು ಆಳದ ಅರಿವಿಲ್ಲದೆ ಹಾನಗುಂಡಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. 2018ರಲ್ಲಿ ಮಾರಣಕಟ್ಟೆ ಚಿತ್ತೂರಿನಲ್ಲಿ ಬಾಲಕಿ ಕಾಲುಸಂಕ ದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಳು. 2022ರಲ್ಲಿ ಬೈಂದೂರಿನ ಬೋಳಂಬಳ್ಳಿ ಎಂಬಲ್ಲಿ ಪುಟ್ಟ ಬಾಲಕಿ ಕಾಲುಸಂಕದಿಂದ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಹೀಗೆ ವರ್ಷವರ್ಷವೂ ಕಡಲು, ನದಿ, ಹೊಂಡಗಳಿಗೆ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವ ಘಟನೆ ನಡೆಯುತ್ತಲೇ ಇದ್ದು ಇದಕ್ಕೆ ಕೊನೆ ಹಾಡಬೇಕಿದೆ.
ಕುಂದಾಪುರ ತಾಲೂಕಿನಲ್ಲಿ 48 ಕಲ್ಲುಕೋರೆ ಹೊಂಡ
ಕುಂದಾಪುರ ತಾಲೂಕಿನಲ್ಲಿ ಒಟ್ಟು 48 ಕಡೆ ಕಲ್ಲುಕೋರೆ ಹೊಂಡ, 25 ಅಪಾಯಕಾರಿ ಮದಗ, 36 ಕಡೆ ತಡೆಬೇಲಿಯಿಲ್ಲದ ಕೆರೆಗಳು, 26 ಕಡೆ ತೆರೆದ ಬಾವಿ, 3 ಕಡೆ ಕೊಜೆಹೊಂಡ, 7 ಕಡೆ ಇಂಗುಗುಂಡಿ, 14 ತೋಡು, 2 ಕೊಳವೆಬಾವಿ, 105 ಕಾಲುಸಂಕ, ಬೈಂದೂರಿನ ವಣಕೊಡ್ಲು, ಹಳ್ಳಿಹೊಳೆಯ ಚಕ್ರಾ, ಗೋಳಿಹೊಳೆಯ ಮಳಾಳಿ, ಯಡ್ತರೆಯ ಕಿಸ್ಮತಿ ಹೊಳೆ, ಹೆಂಗವಳ್ಳಿಯ ಕೆಮ್ ಗುಡ್ಡೆ, ಆಜ್ರಿಯ ರಾಮನಕೊಡ್ಡು ಅಗೋಳಿಹೊಳೆ, ಕುಬ್ಬಾನದಿ, ಚಿತ್ತೂರಿನ ಸೌಪರ್ಣಿಕಾ ನದಿ, ಪಡುವರಿ ಗ್ರಾಮದ ಮುಂಡಾನಹಿತ್ತು ನದಿ ವ್ಯಾಪ್ತಿ ಅಪಾಯಕಾರಿ ಎಂದು ಗುರುತಿಸಲಾಗಿದೆ.
‘ಮಳೆಗಾಲದಲ್ಲಿ ಎದುರಾಗುವ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಭೂಮಿ ಸಂಸ್ಥೆಯ ಮಕ್ಕಳ ಮಿತ್ರರು, ಮಹಿಳಾ ಮಿತ್ರರು ಸಂಘಟನೆ ಜತೆಗೂಡಿ 2012ರಿಂದ ಜಾಗೃತಿ ಅಭಿಯಾನ ನಡೆಸಿಕೊಂಡು ಬರುತ್ತಿದೆ. ಆದಾಗ್ಯೂ ಶಾಶ್ವತ ಪರಿಹಾರ ಇನ್ನೂ ಲಭಿಸಿಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ.
-ಕೃಪಾ ಎಂ.ಎಂ., ಕಾರ್ಯಕರ್ತೆ, ನಮ್ಮ ಭೂಮಿ ಸಂಸ್ಥೆ ಕನ್ಯಾಣ