ಬೈಂದೂರು ಪ.ಪಂ ವ್ಯಾಪ್ತಿಯಿಂದ ಗ್ರಾಮೀಣ ಭಾಗ ಕೈ ಬಿಡಲು ಆಗ್ರಹ; ಆಡಳಿತದ ವಿರುದ್ಧ ಸಿಡಿದೆದ್ದ ರೈತರು

Update: 2026-08-07 18:37 IST

ಬೈಂದೂರು, ಆ.7: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ರೈತ ಸಂಘದ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಧರಣಿ ಒಂದು ವರ್ಷ ಪೂರೈಸಿದ್ದು, ಈವರೆಗೂ ರೈತರ ಬೇಡಿಕೆಗೆ ನ್ಯಾಯ ದೊರೆಯದಿರುವುದನ್ನು ವಿರೋಧಿಸಿ ಸಹಸ್ರಾರು ಸಂಖ್ಯೆಯ ರೈತರು ಶುಕ್ರವಾರ ಪ್ರತಿಭಟನೆ ನಡೆಸಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಡಿಕೆ ಈಡೇರಿಕೆಗಾಗಿ ರೈತ ಸಂಘದ ನೇತೃತ್ವದಲ್ಲಿ ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧೆಡೆ ಹಲವಾರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಇದು ಯಾವುದಕ್ಕೂ ಸರಕಾರದಿಂದ ಸ್ಪಂದನೆ ದೊರೆತಿಲ್ಲ. ಇದರಿಂದ ಸಿಡಿದೆದ್ದ ರೈತರು ಮಾಡು ಇಲ್ಲವೆ ಮಡಿ ಎನ್ನುವಂತೆ ಯಾವುದೆ ಮನ ಓಲೈಕೆಗೂ ಬಗ್ಗದೆ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಪಾದಯಾತ್ರೆ ನಡೆಸಿ ಬಳಿಕ ಬೈಂದೂರು ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿ ದರು. ನಂತರ ಮೆರವಣಿಗೆಯಲ್ಲಿ ಪಾದಯಾತ್ರೆಯ ಮೂಲಕ ಸಾಗಿ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಸಾವಿರಾರು ರೈತರು ಜಮಾಯಿಸಿದರು. ಸ್ಥಳಕ್ಕೆ ಬೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಮಾತನಾಡಿ, ಈಗಾಗಲೆ ಸರಕಾರದ ಮಟ್ಟದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಇದಕ್ಕೆ ಸಮ್ಮತಿಸದ ರೈತರು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

ನಟ ಚೇತನ್ ಬೆಂಬಲ: ರೈತರ ಪ್ರತಿಭಟನೆಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಭಾಗವಹಿಸಿ ಮಾತನಾಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ನಾಯಕರು ರೈತರಿಗೆ ನಿರಂತರ ಅನ್ಯಾಯ ಮಾಡಿದ್ದಾರೆ. ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ರೈತರನ್ನು ಇಷ್ಟೊಂದು ದಿನ ಕಾಯಿಸಿರುವುದು ಸರಿಯಲ್ಲ. ಹೋರಾಟದಿಂದ ಮಾತ್ರ ನ್ಯಾಯ ಪಡೆಯಲು ಸಾಧ್ಯ. ಹೀಗಾಗಿ ಅಧಿಕಾರದಲ್ಲಿರುವವರ ಕುರ್ಚಿ ಅಲ್ಲಾಡಿಸಿದಾಗ ಮಾತ್ರ ಭಯದ ಅನುಭವ ಆಗುತ್ತದೆ ಎಂದರು.

ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಭೇಟಿ ನೀಡಿ, ರಾಜ್ಯ ಸರಕಾರದ ಅಧಿಕಾರಿಗಳ ಜೊತೆ ಮಾತನಾಡಿ ನ್ಯಾಯ ಒದಗಿಸುವ ಪ್ರಯತ್ನ ಮಾಡಿ ರೈತರ ಪರ ನಿಲ್ಲುವುದಾಗಿ ತಿಳಿಸಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗಮಿಸಿ ಮುಖ್ಯಮಂತ್ರಿಗಳ ಜೊತೆ ರೈತರ ನಿಯೋಗ ಭೇಟಿ ಮಾಡಿಸಿ ಗಮನ ಸೆಳೆಯುವ ಭರವಸೆ ನೀಡಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗಗಳ ನ್ಯಾಯಕ್ಕಾಗಿ ಕಳೆದ ಒಂದು ವರ್ಷದಿಂದು ಸಾವಿರಾರು ರೈತರು ಧರಣಿ ನಡೆಸಿದ್ದಾರೆ. ಒಂದು ವರ್ಷ ಕಳೆದರು ಸರಕಾರದಿಂದ ನ್ಯಾಯ ದೊರೆಕಿಲ್ಲ. ಇಂದು ನ್ಯಾಯ ಪಡೆಯದೆ ಸ್ಥಳದಿಂದ ಹಿಂದಿರುಗುವುದಿಲ್ಲ. ರೈತರ ತಾಳ್ಳೆಯ ಕಟ್ಟೆ ಒಡೆದಿದೆ. ನ್ಯಾಯ ಸಿಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಮತ್ತು ಜಿಲ್ಲಾಡಳಿತದ ಬೇಜವ್ದಾರಿಯಾಗಿದೆ ಎಂದರು

ಆರು ರೈತರು ಅಸ್ವಸ್ಥ: ಪ್ರತಿಭಟನೆ ಸಂದರ್ಭ ಸುಮಾರು ಎರಡು ಗಂಟೆ ರಸ್ತೆ ತಡೆ ನಡೆಸಿದ್ದು, ಈ ವೇಳೆ ಆರು ರೈತರು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.

ಈ ಸಂಬಂಧ ನಗರಾಭಿವೃದ್ದಿ ಜಿಲ್ಲಾ ನಿರ್ದೇಶಕರು ವರದಿ ನೀಡಲು ವಿಳಂಬ ಮಾಡಿರುವುದು, ಮಾತ್ರವಲ್ಲದೆ ಹಲವು ಬಾರಿ ಮನವಿ ನೀಡಲು ಕರೆದರು ಭಾಗವಹಿಸಿರಲಿಲ್ಲ. ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಅವರನ್ನು ಕೂಡಲೇ ಅಮಾನತು ಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್, ಪಟ್ಟಣ ಪಂಚಾಯತ್ ಅಧಿಕಾರಿ ಅಜಯ್ ಭಂಡಾರ್ಕರ್, ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ವಿವಿಧ ಮುಖಂಡರು ಹಾಗೂ ರೈತ ಮುಖಂಡರು ಹಾಜರಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News