ಎಂಎಸ್ಎಂಇ ದೇಶದ ಉದ್ಯಮರಂಗದ ಬೆನ್ನೆಲುಬು: ಶರತ್ ಬುದಾಳೆ
ಉಡುಪಿ, ಆ.11: ಅತಿಸಣ್ಣ, ಸಣ್ಣ ಹಾಗೂ ಮಧ್ಯಮಗಾತ್ರದ ಕೈಗಾರಿಕೆಗಳು ದೇಶದ ಉದ್ಯಮರಂಗದ ಬೆನ್ನೆಲುಬು. ಎಂಎಸ್ಎಂಇಯ ಮಾರಾಟಗಾರರೇ ಇದರ ಅಡಿಪಾಯ. ದೇಶದ ದೊಡ್ಡ ಉದ್ಯಮಗಳು ತಮ್ಮ ಕೈಗಾರಿಕೆಗಳಿಗೆ ಎಂಎಸ್ಎಂಇ ಮೇಲೆ ಅವಲಂಬಿತವಾಗಿವೆ ಎಂದು ಮಂಗಳೂರಿನ ಎಂಆರ್ಪಿಎಲ್ನ ಗ್ರೂಪ್ ಜನರಲ್ ಮ್ಯಾನೇಜರ್ ಶರತ್ ಬುದಾಳೆ ಎಸ್. ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸರಕಾರದ ಎಂಎಸ್ಎಂಇ ಸಚಿವಾಲಯದ ಅಡಿಯಲ್ಲಿ ಬರುವ ಮಂಗಳೂರಿನ ಎಂಎಸ್ಎಂಇ ಅಭಿವೃಧ್ಧಿ ಮತ್ತು ಸೌಲಭ್ಯ ಕಚೇರಿ, ಉಡುಪಿಯ ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹಾಗೂ ಪವರ್ ಉಡುಪಿ ಇವುಗಳ ಸಹಯೋಗದಲ್ಲಿ ಅಜ್ಜರಕಾ ಡಿನ ಪುರಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ‘ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ’ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ಹಾಗೂ ದೊಡ್ಡ ಕೈಗಾರಿಕೆಗಳು, ವಿವಿಧ ಬಿಡಿಭಾಗಗಳ ತಯಾರಿಗಾಗಿ ಹೆಚ್ಚಾಗಿ ಎಂಎಸ್ಎಂಇ ಗಳನ್ನೇ ಅವಲಂಬಿಸಿರುತ್ತವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಅರಿತು ಎಂಎಸ್ಎಂಇಗಳು ತಮ್ಮ ಉದ್ಯಮವನ್ನು ಅಭಿವೃಧ್ಧಿ ಪಡಿಸಿಕೊಳ್ಳಲು ಸಾದ್ಯವಿದೆ ಎಂದರು.
ಉಡುಪಿಯಲ್ಲೀಗ ಆಯೋಜಿಸಿದ ಸಮಾವೇಶದಿಂದ ಸಾರ್ವಜನಿಕ ವಲಯದ ಉದ್ಯಮಗಳಿಗೆ ಸೂಕ್ತ ಮಾರಾಟಗಾರ ರನ್ನು ಗುರುತಿಸಲು ಹಾಗೂ ಸಣ್ಣ ಉದ್ಯಮದಾರರಿಗೆ ತಮ್ಮ ಉತ್ಪನ್ನಗಳಿಗೆ ಖರೀದಿದಾರರನ್ನು ಕಂಡುಕೊಳ್ಳಲು ಅವಕಾಶ ಸಿಕ್ಕಿದೆ. ಎರಡೂ ಕ್ಷೇತ್ರದವರು ಇದನ್ನು ಸದುಪಯೋಗ ಪಡಿಸಿಕೊಂಡರೆ ಎಂಎಸ್ಎಂಇಗೆ ವಿಶೇಷ ಪ್ರೋತ್ಸಾಹ ಸಿಗುವಂತಾಗುತ್ತದೆ ಎಂದರು.
ಇಂಥ ಸಮಾವೇಶದಿಂದ ಸಣ್ಣ ಉದ್ಯಮಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಹಾಗೂ ಉದ್ಯಮಶೀಲ ರಾಗಲು ಬಯಸುವವರಿಗೆ ಲಭ್ಯ ವಿರುವ ಸರಕಾರಿ ಯೋಜನೆಗಳ ಬಗ್ಗೆ, ಉದ್ದೇಶಿತ ಉದ್ಯಮಗಳಿಗೆ ಸೂಕ್ತ ಉತ್ಪನ್ನ ಗಳ ಆಯ್ಕೆಯ ಕುರಿತು ತಿಳಿದುಕೊಳ್ಳಲು ಸಾಧ್ಯವಿದೆ ಎಂದು ಶರತ್ ನುಡಿದರು.
ತಮ್ಮ ಎಂಆರ್ಪಿಎಲ್ ತನ್ನ ಉತ್ಪನ್ನಗಳಲ್ಲಿ ಶೇ.58ರಷ್ಟನ್ನು ವಿವಿಧ ಎಂಎಸ್ಎಂಇಗಳಿಂದ ಪ್ರತಿವರ್ಷ ಖರೀದಿಸು ತ್ತಿದೆ. 25-26ನೇ ಸಾಲಿನಲ್ಲಿ 1074 ಕೋಟಿಯಷ್ಟನ್ನುಎಂಎಸ್ಎಂಇಯಿಂದ ಖರೀದಿಸಲಾಗಿದೆ. ಅದೇ ರೀತಿ ಮಹಿಳಾ ಎಂಎಸ್ಎಂಇಗಳಿಂದ 2025-26ರಲ್ಲಿ 122 ಕೋಟಿ ರೂ.ಗಳ ಉತ್ಪನ್ನಗಳ ವ್ಯವಹಾರ ನಡೆಸಿದೆ ಎಂದು ಅವರು ವಿವರಿಸಿದರು.
ಆದ್ದರಿಂದ ಬೃಹತ್ ಕೈಗಾರಿಕೆಗಳಿಗೆ ಎಂಎಸ್ಎಂಇ ಎಂದೂ ಪ್ರತಿಸ್ಪರ್ಧಿ ಗಳಲ್ಲ. ಅವುಗಳು ಪರಸ್ಪರ ಪೂರಕವಾಗಿ ರುವವು. ಜಿಲ್ಲೆಯ ಸಣ್ಣ, ಅತಿಸಣ್ಣ ಕೈಗಾರಿಕೆಗಳು ಮಾರುಕಟ್ಟೆಗೆ ಅಗತ್ಯವಿರುವ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ತಾವು ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದು ಶರತ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಎಂಎಸ್ಎಂಇ ಡಿಎಫ್ಒ ನಿರ್ದೇಶಕ ದೇವರಾಜ್ ಕೆ. ಅವರು ಮಾತನಾಡಿ, ಇಲ್ಲಿನ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕಂಡು ಕೊಳ್ಳಲು ಹೋರಾಟ ನಡೆಸುತ್ತಿವೆ. ಇಂಥ ಸಮಾವೇಶವು ಅವುಗಳಿಗೆ ಒಂದು ಸುವರ್ಣಾವಕಾಶವಾಗಿರುತ್ತವೆ. ಚಾಲ್ತಿ ಮಾರುಕಟ್ಟೆಯ ಕುರಿತು ಅರಿತು ಅದನ್ನು ಅನುಷ್ಠಾನಗೊಳಿಸಲು ಅವುಗಳಿಗೆ ಇಲ್ಲಿ ಅವಕಾಶವಿದೆ ಎಂದರು.
ಕರಾವಳಿಯಲ್ಲಿ 65,000 ಎಂಎಸ್ಎಂಇ ಉದ್ಯಮಗಳಿವೆ. ಇವುಗಳಲ್ಲಿ 62,000 ಮೈಕ್ರೋ (ಅತಿಸಣ್ಣ) ಉದ್ಯಮ ಗಳು. ಅಂದರೆ ಒಟ್ಟು ಉದ್ಯಮಗಳಲ್ಲಿ ಶೇ.98ರಷ್ಟು. ಇವುಗಳನ್ನು ಅಭಿವೃದ್ಧಿ ಪಡಿಸಲು ನಿಮಗಿಲ್ಲಿ ಅವಕಾಶ ಸಿಕ್ಕಿದ್ದು, ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ. ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಬ್ಯಾಂಕುಗಳು ಎಂಎಸ್ಎಂಇಗೆ ಒಟ್ಟು 3700 ಕೋಟಿ ರೂ.ಗಳ ಸಾಲವನ್ನು ನೀಡಿವೆ. ಈ ಬಾರಿ ಅದನ್ನು 4200 ಕೋಟಿ ರೂ.ಗಳಿಗೆ ನಿಗದಿ ಪಡಿಸಿದ್ದು, ಇದುವರೆಗೆ ಶೇ.52ರಷ್ಟನ್ನು (2160 ಕೋಟಿ) ಈಗಾಗಲೇ ಸಾಲ ವಿತರಿಸಲಾಗಿದೆ ಎಂದರು.
ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ವಸಂತ ಕಿಣಿ, ಪವರ್ನ ವೀಣಾ ಕುಡ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಶಾಖೆ ಎಂಎಸ್ಎಂಇ ಡಿಎಫ್ಒದ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ ಎಂ. ಅತಿಥಿಗಳನ್ನು ಸ್ವಾಗತಿಸಿದರೆ, ಉಡುಪಿ ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಡಾ.ವಿಜಯೇಂದ್ರ ರಾವ್ ವಂದಿಸಿದರು. ಸುಮನ ಎಸ್.ರಾಜು ಕಾರ್ಯಕ್ರಮ ನಿರೂಪಿಸಿದರು.