ಪಾಂಗಾಳ ರಬೀಂದ್ರನಾಯಕ್ ಸಭಾಭವನ ಉದ್ಘಾಟನೆ

Update: 2026-08-17 20:10 IST

ಉಡುಪಿ, ಆ.17: ಯು.ಎಸ್.ನಾಯಕ್‌ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ನಿರ್ಮಾಣಗೊಂಡ ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸಭಾಭವನವನ್ನು ಟ್ರಸ್ಟಿ ಸೀತಾರಾಮ ನಾಯಕ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ಟ್ರಸ್ಟ್‌ನ ಸಮಾಜ ಮುಖಿ ಸೇವಾಕಾರ್ಯವನ್ನು ಶ್ಲಾಘಿಸಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ಉಡುಪಿಯ ಉತ್ತುಂಗದ ಸಾಧನೆಗೆ ಇಂಥ ಕೊಡುಗೆಗಳು ಪೂರಕವಾಗಿ ಸಹಕರಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಉಡುಪಿ ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಉಡುಪಿ ಬಿಇಒ ಡಾ.ಯಲ್ಲಮ್ಮ, ಹಿರಿಯ ಪರಿಸರವಾದಿ ರವೀಂದ್ರನಾಥ ಶ್ಯಾನ್ ಭಾಗ್, ಟ್ರಸ್ಟಿ ಸುರೇಶ ನಾಯಕ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಎಲ್‌ಐಸಿಯ ಕಂಡ್ಲೂರು ಪುಂಡಲೀಕ ಪ್ರಭು, ಇಲಾಖಾ ಟಿಪಿಇಒ ರವೀಂದ್ರ ನಾಯ್ಕ್, ಬಿಆರ್‌ಸಿ ಸಂಯೋಜಕ ಶೇಖರ ಭೋವಿ, ಮ್ಯಾನೇಜರ್ ಸಂತೋಷ್, ವಿವಿಧ ಶಿಕ್ಷಕ ಸಂಘದ ಪದಾಧಿಕಾರಿ ಗಳಾದ ಸಂಜೀವ ನಾಯಕ್, ಕಿರಣ್ ಕುಮಾರ್ ಕಟಪಾಡಿ ಮುಂತಾದವರು ಹಾಜರಿದ್ದರು.

ಟ್ರಸ್ಟ್ ವತಿಯಿಂದ ಸುಮಾರು 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಭಾಭವನದಲ್ಲಿ ಸುಮಾರು 125 ಮಂದಿಗೆ ಆಸನ ವ್ಯವಸ್ಥೆ ಇದ್ದು ಶಿಕ್ಷಣ ಇಲಾಖೆಯ ಸಭೆ, ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News