ಉಡುಪಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ
ಉಡುಪಿ, ಆ.18: ಉಡುಪಿ ಶಾಲಾ ಶಿಕ್ಷಣ ಇಲಾಖೆ ಮತ್ತು ಕಲ್ಯಾಣಪುರ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾಮಟ್ಟದ ಬಾಲಕ, ಬಾಲಕಿಯರ ಕರಾಟೆ ಪಂದ್ಯಾವಳಿ ಕಾಲೇಜಿನ ತ್ರಿ ಶತಮಾನ ಸಭಾಭವನದಲ್ಲಿ ಆ.11ರಂದು ನಡೆಯಿತು.
ಪಂದ್ಯಾವಳಿಯನ್ನು ಉದ್ಘಾಟಿಸಿದ ಫೆರ್ನಾಂಡಿಸ್ ಗ್ರೂಪಿನ ಮಾಲಕ ಹಾಗೂ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ವಿಲ್ಸನ್ ಫೆರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ, ಶಿಸ್ತು, ದೈಹಿಕ ಸಾಮರ್ಥ್ಯದ ಜೊತೆಗೆ ಆತ್ಮರಕ್ಷಣೆಯ ಕೌಶಲ್ಯವನ್ನು ಬೆಳೆಸಲು ಕರಾಟೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಿಲಾಗ್ರಿಸ್ ಸಂಸ್ಥೆಯ ಸಂಚಾಲಕ ಅತೀ ವಂ. ಫ್ರಾನ್ಸಿಸ್ ಲುವಿಸ್ ಮಾತನಾಡಿ, ಕರಾಟೆ ಸಮಯ ಪ್ರಜ್ಞೆ, ಏಕಾಗ್ರತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕ ರವೀಂದ್ರ ಉಪದ್ಯಾಯ, ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ಮೆಂಡೋನ್ಸಾ, ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತಾಕ್ಷ, ಕಾರ್ಯದರ್ಶಿ ವಾಮನ್ ಪಾಲನ್, ಸುಕೇಶ್ ಶೆಟ್ಟಿ, ಮಂಜುನಾಥ ಜೋಗಿ, ದೈಹಿಕ ನಿರ್ದೇಶಕ ಸುಮನ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಚೈತ ಸ್ವಾಗತಿಸಿ, ಆದಿತ್ಯ ವಂದಿಸಿ, ಸುರೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.