ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ
ಉಡುಪಿ, ಆ.17: ಅಂಚೆ ಇಲಾಖೆಯ ವತಿಯಿಂದ 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟವರಿಗೆ ‘ಭೂಮಿತಾಯಿಗೆ ಒಂದು ಪತ್ರ: ಪ್ರಕೃತಿ ಉಳಿಸಲು ನನ್ನ ಭರವಸೆ’ ಎಂಬ ವಿಷಯದ ಕುರಿತು ಮುಕ್ತವಾಗಿ ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಾಳುಗಳು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಂತರ್ದೇಶೀಯ ಪತ್ರ (ಇನ್ಲ್ಯಾಂಡ್ ಲೆಟರ್) ಕಾರ್ಡ್ನಲ್ಲಿ 500 ಶಬ್ದಗಳು ಮೀರದಂತೆ ಬರೆದು ಅಥವಾ ಎ-4 ಹಾಳೆಯಲ್ಲಿ 1000 ಶಬ್ದಗಳು ಮೀರದಂತೆ ಲೇಖನ ವನ್ನು ಕೈಬರಹದಲ್ಲಿ ಬರೆದು-ಲಕೋಟೆಯಲ್ಲಿ ತುಂಬಿಸಿ, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ-576101 ಇವರಿಗೆ ಅಕ್ಟೋಬರ್ 31ರ ಒಳಗೆ ಅಂಚೆ ಮೂಲಕ ಕಳುಸಿಕೊಡಬಹುದು. ಕೊರಿಯರ್ ಮೂಲಕ ಬಂದ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ಸ್ಪರ್ಧಾಳುಗಳು ತಮ್ಮ ಲೇಖನದ ಮೇಲ್ಭಾಗದಲ್ಲಿ 18 ವರ್ಷ ಮೇಲಿನವರು /18 ವರ್ಷ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿ ಸಬೇಕು. ಅತ್ಯುತ್ತಮ ಮೂರು ಕೃತಿಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000, 25,000, 10,000 ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 ಅನ್ನು ನೀಡಲಾಗುವುದು.
ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಡೆಯುವ ಈ ಪತ್ರಲೇಖನ ಸ್ಫರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.