ಅಮಾಸೆಬೈಲು, ಆ.25: ರಟ್ಟಾಡಿಯ ನರಸೀಪುರ ಶ್ರೀಯೋಗರೂಢ ನರಸಿಂಹ ದೇವಸ್ಥಾನದ ಭೋಜನ ಶಾಲೆಯ ಬೀಗ ಹೊಡೆದು ಬಲತ್ಕಾರ ವಾಗಿ ವಶಪಡಿಸಿಕೊಳ್ಳಲು ಯತ್ನಿಸಿರುವ ಘಟನೆ ಆ.23ರಂದು ಮಧ್ಯಾಹ್ನ ವೇಳೆ ನಡೆದಿದೆ.

ರಟ್ಟಾಡಿ ಗ್ರಾಮದ ನರಸೀಪುರ ಶ್ರೀಯೋಗರೂಢ ನರಸಿಂಹ ದೇವಸ್ಥಾನ ಎದುರಿನಲ್ಲಿರುವ ದೇವಳದ ಭೋಜನ ಶಾಲೆಗೆ ಹಿಂದೆ ಇದ್ದ ನಾಮ ಫಲಕವನ್ನು ತೆಗೆದು ಸಮುದಾಯ ಎಂಬ ಪದ ಸೇರಿಸಿ ಶ್ರೀ ಯೋಗರೂಢ ನರಸಿಂಹ ದೇವಸ್ಥಾನ ಸಮುದಾಯ ಭವನ ಎಂಬ ಹೊಸ ನಾಮ ಫಲಕವನ್ನು ಅಳವಡಿಸಲಾಗಿತ್ತು.

ಜಯಂತ್ ಅಚಾರಿ, ರಕ್ಷಿತ ಅಚಾರಿ, ರಚಿತ್ ಅಚಾರಿ, ರಾಜೇಶ್ ಅಚಾರಿ, ರಮೇಶ್ ಮಡಿವಾಳ ಮತ್ತು ಇತರರು ಗುಂಪು ಕಟ್ಟಿಕೊಂಡು ಬಂದು ಭೋಜನ ಶಾಲೆಯ ಬೀಗ ಒಡೆದು ಅನಧಿಕೃತವಾಗಿ ಸಿಸಿಟಿವಿ ಹಾಕಿ ಹೊಸ ನಾಮ ಫಲಕ ಅಳವಡಿಸಿ ಭೋಜನ ಶಾಲೆಯನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ದೂರಲಾಗಿದೆ.

ವ್ಯವಸ್ಥಾಪನ ಸಮಿತಿಯ ಸುಪರ್ದಿಯಲ್ಲಿರುವ ಭೋಜನ ಶಾಲೆಯ ಬೀಗ ಹೊಡೆದಿದ್ದು ಈ ಬಗ್ಗೆ ದೇವಸ್ಥಾನದ ಅಧ್ಯಕ್ಷ ಶಂಕರನಾರಾಯಣ ಕೊಡ್ಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor