ಹಿಂದುತ್ವವಾದಿ ಅಜೆಂಡಾ ಮೂಲಕ ಸಂವಿಧಾನ ನಾಶ ಮಾಡಲು ಯತ್ನ: ಪ್ರೊ.ಫಣಿರಾಜ್
ಉಡುಪಿ, ಆ.26: ಉತ್ತರಖಾಂಡ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿರುವ ಸ್ಥಳವನ್ನು ಶುದ್ದೀಕರಿಸಿರುವುದು ಸಂವಿಧಾನ ವಿರೋಧಿ ಭಯೋತ್ಪಾದಕ ಕೃತ್ಯವಾಗಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಕಟುವಾಗಿ ಟೀಕಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಸಹಬಾಳ್ವೆ ಉಡುಪಿ ಜಿಲ್ಲೆ ಇವುಗಳ ನೇತೃತ್ವದಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ನಡೆಸಿದ ಜಾತಿ ದೌರ್ಜನ್ಯ ವಿರೋಧಿಸಿ ಬುಧವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಭಯೋತ್ಪಾದಕ ಕೃತ್ಯ ನಮ್ಮ ದೇಶ, ರಾಜಕೀಯ, ಸಮಾಜದಲ್ಲಿ ಯಾವುದೇ ತಲ್ಲಣಗಳನ್ನು ಮಾಡದೆ ಇರು ವುದು ನೋವಿನ ಸಂಗತಿಯಾಗಿದೆ. ಈ ಘಟನೆ ಭಾರತದ ಸಂವಿಧಾನದ ಎಲ್ಲ ಆಶಯಗಳ ವಿರುದ್ಧವಾದುದು. ಸಾಮಾಜ್ರಶಾಹಿ ವಿರುದ್ಧ ಸ್ವಾತಂತ್ರ್ಯ ಹೋರಾಟದ ಮೂಲಕ ಕಟ್ಟಿದ ಮೌಲ್ಯಗಳು, ಸಂವಿಧಾನದ ಅಡಿಪಾಯವನ್ನು ನಾಶ ಮಾಡುವ ಭಯೋತ್ಪಾದಕ ಕೃತ್ಯವಾಗಿದೆ. ನಿಜವಾಗಿಯೂ ದೇಶದ್ರೋಹ ಕಾಯಿದೆ ಯನ್ನು ಈ ಕೃತ್ಯ ಎಸಗಿದವರ ಮೇಲೆ ಹಾಕಬೇಕಾಗಿತ್ತು ಎಂದರು.
ಸಂವಿಧಾನದ ಮೂಲಭೂತ ಹಕ್ಕುಗಳು, ಪ್ರಜಾಪ್ರಭುತ್ವ ಅಡಿಪಾಯ ಆಗಿರುವ ಸಮಾನತೆಯನ್ನು ಹಿಂದುತ್ವವಾದಿ ಮೆದುಳು ಆಗಿರುವ ಬ್ರಾಹ್ಮಣಶಾಹಿಗಳಿಗೆ ಸಹಿಸಲು ಆಗುತ್ತಿಲ್ಲ. ಈ ದೇಶದಲ್ಲಿ ಸಂವಿಧಾನ ಇರುವವರೆಗೆ ಬ್ರಾಹ್ಮಣ ಶಾಹಿಗೆ ತನ್ನ ಅಧಿಕಾರವನ್ನು ಭಾರತದಲ್ಲಿ ಪುನರ್ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸರಕಾರ ಹಿಂದುತ್ವವಾದಿ ಅಜೆಂಡಾ ಮೂಲಕ ಭಾರತ ಸಂವಿಧಾನವನ್ನು ನಾಶ ಮಾಡಲು ಹೊರಟಿದೆ. ಈ ಅಜೆಂಡಾ ಒಂದೊಂದಾಗಿಯೇ ಇಂದು ಹೊರಗಡೆ ಬರುತ್ತಿದೆ. ಇದನ್ನು ನಾವು ಈ ಘಟನೆಯಿಂದ ನಾವು ಮನಗಾಣಬೇಕಾಗಿದೆ ಎಂದು ಅವರು ತಿಳಿಸಿದರು.
ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ಟರ್ ಮಾತನಾಡಿ, ಇಂದು ಕೆಲವರು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅದಕ್ಕಾಗಿ ಹಿಂದುಳಿದವರ್ಗದ ವರನ್ನು ದಲಿತರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಆದರೆ ನಿಜವಾಗಿ ದಲಿತರಿಗೆ ಮೀಸಲಾತಿಯಲ್ಲಿ ಸಿಗುತ್ತಿರುವುದು ಕೇವಲ ಶೇ.8 ಮಾತ್ರ. ಈ ವಿಚಾರದಲ್ಲಿ ಕುತಂತ್ರ ಮಾಡುತ್ತಿದ್ದಾರೆ. ಮೀಸಲಾತಿ ಬೇಡ ಹೇಳುವ ನ್ಯಾ.ಸಂತೋಷ್ ಹೆಗ್ಡೆಗೆ ಮೇಲ್ಜಾತಿಯ ಬಡವರಿಗೆ ನೀಡಲಾದ ಶೇ.10 ಮೀಸಲಾತಿ ಕಾಣುತ್ತಿಲ್ಲ ಯಾಕೆ. ಅವರು ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ದೂರಿದರು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಭಾರತದಲ್ಲಿ ಇರುವಷ್ಟು ಅನಿಷ್ಟ ಪದ್ಧತಿಗಳು ಇಡೀ ಜಗತ್ತಿನಲ್ಲಿ ಎಲ್ಲೂ ಇಲ್ಲ. ಮೂಢನಂಬಿಕೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿದ್ದವು. ಸಂವಿಧಾನ ಜಾರಿಯಾದ ಪರಿಣಾಮ ಅವುಗಳಲ್ಲಿ ಕೆಲವು ಪದ್ಧತಿಯಿಂದ ಮಹಿಳೆ ಯರಿಗೆ ಮುಕ್ತಿ ದೊರೆತಿವೆ. ಸಂವಿಧಾನದಿಂದ ಮನುವಾದಿಗಳ ಕುತಂತ್ರವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ. ಬಿಜೆಪಿ, ಆರ್ಎಸ್ಎಸ್ ಮತ್ತು ಸಂಘಪರಿವಾರ ದೇಶಪ್ರೇಮದ ಹೆಸರಿನಲ್ಲಿ ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಸಂಸ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಂದರಿ ಪುತ್ತೂರು, ದಸಂಸ ಮುಖಂಡರಾದ ಶ್ಯಾಮ್ರಾಜ್ ಬಿರ್ತಿ, ಕುಸುಮ ಗುಜ್ಜರಬೆಟ್ಟು, ರಾಜು ಬೆಟ್ಟಿನಮನೆ, ಸಂಜೀವ ಬಳ್ಕೂರು, ಮಂಜುನಾಥ್ ಬಳ್ಕೂರು, ಶಿವಾನಂದ ಮೂಡಬೆಟ್ಟು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇಸ್ಮಾಯಿಲ್ ಹುಸೇನ್, ಟಿ.ಎಂ.ಜಫರುಲ್ಲಾ, ಹುಸೇನ್ ಕೋಡಿಬೆಂಗ್ರೆ, ಅಬ್ದುಲ್ ಅಝೀಝ್ ಉದ್ಯಾವರ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಚಾರ್ಲ್ಸ್ ಆ್ಯಂಬ್ಲರ್ ಮೊದಲಾದವರು ಉಪಸ್ಥಿತರಿದ್ದರು.