ಯೂನಿಟ್ ರಕ್ತದಿಂದ ಮೂರು ಜನರ ಜೀವ ರಕ್ಷಣೆ: ಜತ್ತನ್ನ
ಉಡುಪಿ, ಸೆ.1: ನಾವು ದಾನ ಮಾಡುವ ಒಂದು ಯುನಿಟ್ ರಕ್ತ ಒಂದು ಮಗುವನ್ನು, ಒಬ್ಬ ತಂದೆಯನ್ನು, ಒಬ್ಬ ತಾಯಿಯನ್ನು ಅಥವಾ ಒಬ್ಬ ಬಂಧುವನ್ನು ಉಳಿಸಿಕೊಳ್ಳಬಹುದು. ಒಂದು ಯೂನಿಟ್ ರಕ್ತದಿಂದ ಮೂರು ಜನರಂತು ಉಳಿದು ಕೊಳ್ಳುತ್ತಾರೆ. ಹಾಗಾಗಿ ರಕ್ತದಾನ ಶಿಬಿರ ಅನ್ನೋದು ಅದರ ನಿಜ ಅರ್ಥದಲ್ಲಿ ಜೀವದಾನ ಶಿಬಿರ ಎಂದಾ ಗಿದೆ ಎಂದು ಕರ್ನಾಟಕ ಸರಕಾರ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಸಂಸ್ಥೆಯ ಗೌರಾಧ್ಯಕ್ಷರಾಗಿದ್ದ ಮಂಜುನಾಥ್ ಉದ್ಯಾವರ ಸಂಸ್ಮರಣ ಕಾರ್ಯಕ್ರಮ ಮಂಜಣ್ಣ ನೆನಪು- 14 ಅಂಗವಾಗಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಜರಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಟಪಾಡಿ ಬ್ರಹ್ಮಶ್ರೀ ಮೀಡಿಯಾ ನೆಟ್ವರ್ಕ್ ಆಡಳಿತ ನಿರ್ದೇಶಕ ಸುನಿಲ್ ಡಿ.ಬಂಗೇರ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿತಿನ್ ಜೆ. ಸಾಲಿಯಾನ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಹಲೀಮಾ ಸಾಬ್ಜು ಟ್ರಸ್ಟ್ ಆಡಳಿತ ವಿಶ್ವಸ್ಥ ಅಬ್ದುಲ್ ಜಲೀಲ್ ಸಾಹೇಬ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ರಿಯಾಜ್ ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ 85 ಮಂದಿ ರಕ್ತದಾನ ಮಾಡಿದ್ದು 75 ಯುನಿಟ್ ರಕ್ತ ಸಂಗ್ರಹಿಸಲಾಯಿತು.