ಉಡುಪಿ, ಸೆ.12: ಪರಂಪರೆಯ ಅನುಭವದಿಂದ ದೇಶ ಕಟ್ಟಲು ಸಾಧ್ಯ. ನಾವು ಈ ಪರಂಪರೆಯನ್ನು ಹೊಸ ಝೆನ್‌ಜಿ ಪೀಳಿಗೆಗೆ ದಾಟಿಸಬೇಕಾಗಿದೆ. ಪರಂಪರೆಯ ಅರಿವು, ಅನುಭವ, ತಿಳುವಳಿಕೆಯನ್ನು ಬಿಟ್ಟು ಸಮಾಜ, ದೇಶವನ್ನು ಕಟ್ಟಲಾಗದು ಎಂದು ಹಿರಿಯ ಜಾನಪದ ಸಾಹಿತಿ, ನಿವೃತ್ತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಶನಿವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಸಹಯೋಗದಲ್ಲಿ ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ.ಯು.ಪಿ. ಉಪಾಧ್ಯಾಯ- ಡಾ.ಸುಶೀಲಾ ಪಿ.ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ನಮಗೆಲ್ಲಾ ಸಂತೋಷ, ಸಂತೃಪ್ತಿ ಹಾಗೂ ಸಂಭ್ರಮ ಏನೆಂದರೆ, ಇಂದಿನ ಪೀಳಿಗೆಯ ಪರಂಪರೆಯಲ್ಲಿ ನಾವೆಲ್ಲ ಯಾವೊದೋ ಒಂದು ಕೊಂಡಿಯಾಗಿ ದ್ದೇವೆ ಎಂಬುದು. ನಾವೆಲ್ಲ ಈ ಝೆನ್‌ಜಿಗಿಂತ 60-70 ವರ್ಷ ಹಿಂದೆ ಹುಟ್ಟಿದ್ದೇವೆ. ಹೀಗಾಗಿ ನಮ್ಮ ಮಾತು ಅವರಿಗೆ ಅರ್ಥವಾಗಲಿಕ್ಕಿಲ್ಲ. ಅವರ ಭಾಷೆ ನಮಗೆ ಅರ್ಥವಾಗಲಿಕ್ಕಿಲ್ಲ. ಏಕೆಂದರೆ ಇಂಥ ಸಂದರ್ಭದಲ್ಲಿ ಸಂವಹನ ಕಷ್ಟ ಎಂದು ಡಾ.ವಿವೇಕ ರೈ ಹೇಳಿದರು.

ದೇಶದ ಒಂದು ವಯಸ್ಸಿನ ಝೆನ್‌ಜಿ ವರ್ಗ 10ಶೇ. ಇದ್ದು, ಅವರಿಂದು ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುತ್ತಾರೆ. ತಂತ್ರಜ್ಞಾನದಲ್ಲಿ ಅವರು ನಮಗಿಂತ 100 ಪಟ್ಟು ಮುಂದಿದ್ದಾರೆ. ಆದರೆ ನಮಗೆ ಒಂದು ಕಾಲದಲ್ಲಿದ್ದ ತಿಳುವಳಿಕೆ ಅದಕ್ಕಿಂತ ಭಿನ್ನವಾಗಿತ್ತು, ಬಹಳ ಮುಖ್ಯವಾಗಿತ್ತು. ಅದನ್ನು ಮರೆತು ನಾವು ಸಮಾಜವನ್ನು, ದೇಶವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು.

ಇಂದು ಕೋಟಿ, ಟ್ರಿಲಿಯನ್ ಆರ್ಥಿಕತೆಯಿದ್ದರೂ ಭಾಷೆ, ಸಂಸ್ಕೃತಿ ತಿಳಿಯದಿದ್ದರೆ ಏನು ಪ್ರಯೋಜನ? ಹಣದಿಂದ ಎಲ್ಲವನ್ನೂ ಕಟ್ಟಲಾಗದು. ವಿದ್ವತ್ ಪರಂಪರೆ ಕ್ಷೀಣಿಸುತ್ತಿದ್ದು ಹೊಸ ಪರಂಪರೆಯನ್ನು ಜೋಡಿಸಬೇಕು. ತಿಳುವಳಿಕೆಗೆ ಕೊನೆಯಿಲ್ಲ. ಪೂರಕ ಮನೋಧರ್ಮವಿಲ್ಲದೆ ಸಂಶೋಧನೆ ಸಾಧ್ಯವಾಗದು. ಸಂಸ್ಕೃತಿಯ ಒಳಹೋಗಿ ಸಂಶೋಧನೆ, ಅಧ್ಯಯನ ಮುಂದುವರಿಯಬೇಕು ಎಂದೂ ಡಾ.ರೈ ಅಭಿಪ್ರಾಯಪಟ್ಟರು.

ಡಾ.ಉಪಾಧ್ಯಾಯ ದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಷಾ ತಂತ್ರಾಂಶ ತಜ್ಞ ಹಾಗೂ ಸಂಶೋಧಕ ಪ್ರೊ.ಕೆ. ಪಿ. ರಾವ್, ಚಿಕಿತ್ಸಕ ಬುದ್ಧಿ ಹಾಗೂ ವಿವೇಕದಿಂದ ಪ್ರತಿಯೊಂದನ್ನು ನೋಡುವ ಗುಣವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು. ಸಂಸ್ಕೃತಕ್ಕಿಂತಲೂ ತುಳು ಹೆಚ್ಚು ಸ್ವರವಂತ ಭಾಷೆ. ತುಳುಭಾಷೆಯನ್ನು ಕನ್ನಡ ಲಿಪಿಯಲ್ಲೇ ಹೆಚ್ಚಾಗಿ ಬರೆಯಲಾಗುತ್ತದೆ. ತುಳು ಲಿಪಿಯನ್ನು ಹೆಚ್ಚಾಗಿ ಬಳಸಿದವರು ಸಮಾಜ ಮೇಲ್ವರ್ಗದವರು ಮಾತ್ರ. ಆದರೆ ಅವರು ಅದನ್ನು ಕಾವ್ಯ ಬರೆಯಲು ಬಳಸಿಲ್ಲ. ತುಳು ಭಾಗವತ ಬರೆದುದು ಕನ್ನಡ ಲಿಪಿಯಲ್ಲೇ ಎಂದರು.

ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕನರಾಡಿ ವಾದಿರಾಜ ಭಟ್, ಜ್ಞಾನದ ಬೆಳಕನ್ನು ತೋರಿದವರನ್ನು ನಾವೆಂದೂ ಮರೆಯಬಾರದು. ನಿಜವಾದ ಸಂಶೋಧಕರು, ತಜ್ಞರು ಯಾರು ಎಂಬ ಪ್ರಶ್ನೆ ಇಂದು ಕಾಡುತ್ತಿದೆ. ಹಳ್ಳಿಯಲ್ಲಿರುವ ಜನಪದರ ವಿದ್ವತ್ತನ್ನು ಗುರುತಿಸುವ ಕೆಲಸ ಇಂದು ನಡೆಯಬೇಕು ಎಂದರು.

ಡಾ.ಉಪಾದ್ಯಾಯ ದಂಪತಿ ಪ್ರಶಸ್ತಿ ಪುರಸ್ಕೃತ ಕೆ.ಪಿ.ರಾವ್ ಕುರಿತು ಯಕ್ಷಗಾನ ಹಿರಿಯ ವಿದ್ವಾಂಸ ಡಾ.ಕೆ.ರಾಘವ ನಂಬಿಯಾರ್ ಹಾಗೂ ಕು. ಶಿ. ಜಾನಪದ ಪ್ರಶಸ್ತಿ 2026 ಪುರಸ್ಕೃತ ಡಾ.ಕನರಾಡಿ ವಾದಿರಾಜ್ ಭಟ್ ಕುರಿತು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಚಂದ್ರಾವತಿ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಎಂಜಿಎಂ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಗಾಯತ್ರಿ ಪೈ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



 


 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor