ಕೊಲ್ಲೂರು ದೇವಳಕ್ಕೆ 3 ಕೋಟಿ ರೂ. ವೆಚ್ಚದ ಬೆಳ್ಳಿರಥ ಸಮರ್ಪಣೆ
Update: 2026-06-21 20:51 IST
ಕುಂದಾಪುರ, ಜೂ.21: ಬೆಂಗಳೂರು ಪದ್ಮಶ್ರೀ ಆರ್ಎಂಬಿ ಆರಾಧ್ಯ ಟ್ರಸ್ಟ್ ವತಿಯಿಂದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ರವಿವಾರ ಸುಮಾರು ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಬೆಳ್ಳಿರಥವನ್ನು ಸಮರ್ಪಿಸಲಾಯಿತು.
ದೇವಳದ ತಂತ್ರಿ, ಪ್ರಧಾನ ಅರ್ಚಕ ಡಾ.ಕೆ.ರಾಮಚಂದ್ರ ಅಡಿಗ ಬೆಳಿಗ್ಗೆ 6.30ರಿಂದ ಸಂಕಲ್ಪದೊಂದಿಗೆ ಧಾರ್ಮಿಕ ವಿಧಿಗಳನ್ನು ಆರಂಭಿಸಿ ರಥಶುದ್ದಿ ಹೋಮ, ರಥದಿಕ್ಪಾಲ ಬಲಿ, ಪೀಠಪೂಜೆ ನೆರವೇರಿಸಿ, ಶ್ರೀಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ 11 ಗಂಟೆಗೆ ನೂತನ ಬೆಳ್ಳಿರಥವನ್ನು ದೇವರಿಗೆ ಸಮರ್ಪಿಸಿದರು. ನಂತರ ದೇವಳದ ಒಳಪ್ರಾಂಗಣ ದಲ್ಲಿ ನೂತನ ರಥದಲ್ಲಿ ದೇವರ ಉತ್ಸವ ನೆರವೇರಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಸದಸ್ಯರಾದ ಆಲೂರು ರಘುರಾಮ ದೇವಾಡಿಗ, ಮಹಾಲಿಂಗ ನಾಯ್ಕ್, ಯು.ರಾಜೇಶ್ ಕಾರಂತ್, ಸುಧಾ ಕೆ., ಧನಾಕ್ಷಿ ವಿಶ್ವನಾಥ ಹಾಗೂ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.