×
Ad

38ನೇ ಕಳ್ತೂರು ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಾರ್ವಜನಿಕ ರುದ್ರಭೂಮಿ ನಿರ್ಮಾಣ: ಮಾ.8ರಂದು ಲೋಕಾರ್ಪಣೆ

Update: 2026-03-07 21:51 IST

ಉಡುಪಿ, ಮಾ.7: ಹೆಬ್ರಿಗೆ ಸಮೀಪದ ಗ್ರಾಮೀಣ ಪ್ರದೇಶವಾದ 38ನೇ ಕಳ್ತೂರು ಸಂತೆಕಟ್ಟೆಯಲ್ಲಿ ದಾನಿಗಳ ನೆರವಿನಿಂದಲೇ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಸಾರ್ವಜನಿಕ ಹಿಂದೂ ರುದ್ರಭೂಮಿ ನಿರ್ಮಾಣ ಗೊಂಡಿದ್ದು ಮಾ.8ರಂದು ರವಿವಾರ ಇದು ಲೋಕಾರ್ಪಣೆಗೊಳ್ಳಲಿದೆ.

ಕಳ್ತೂರು ಸಂತೆಕಟ್ಟೆಯಲ್ಲಿ ಈ ಮೊದಲು ಸ್ಮಶಾನ ಇದ್ದಿರಲಿಲ್ಲ. ದೂರದ ಕೊಕ್ಕರ್ಣೆ, ಹೆಬ್ರಿಗೆ ಇದಕ್ಕಾಗಿ ಹೋಗ ಬೇಕಿತ್ತು. ಕಳ್ತೂರು ಸಂತೆಕಟ್ಟೆಯಲ್ಲೂ ಸುಸಜ್ಜಿತವಾದ ರುದ್ರಭೂಮಿಯನ್ನು ನಿರ್ಮಿಸುವ ಸಂಕಲ್ಪ ಈಗ ಈಡೇರಿದೆ.

‘ನಮ್ಮೂರಿನ ಜನರಲ್ಲಿ ಇನ್ನೂ ಕೂಡ ಸ್ಮಶಾನದ ಬಗೆಗೆ ಭಯವಿದೆ. ಹಾಗಾಗಿ ಸ್ಮಶಾನ ಪುಣ್ಯದ ಭೂಮಿ ಎಂಬ ಪರಿಕಲ್ಪನೆಯಲ್ಲಿ ಜನರ ಭಯ ದೂರವಾಗಿಸಲು ಭವ್ಯವಾಗಿ ಸಕಲ ವ್ಯವಸ್ಥೆಯೊಂದಿಗೆ ರುದ್ರಭೂಮಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದೇವೆ’ ಎಂದು 38ನೇ ಕಳ್ತೂರು ಸಂತೆಕಟ್ಟೆಯ ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರುಧ್ರಭೂಮಿ ನಿರ್ಮಾಣದ ರೂವಾರಿ ಬಿ.ಚಂದ್ರಶೇಖರ ಶೆಟ್ಟಿ ತಿಳಿಸಿದರು.

78 ಸೆನ್ಸ್ ಜಾಗವನ್ನು ಸಾರ್ವಜನಿಕ ಹಿಂದೂ ರುದ್ರಭೂಮಿಗಾಗಿಯೇ ಕಾದಿರಿಸಿ ಆದೇ ಜಾಗದಲ್ಲಿ ಸಾರ್ವಜನಿಕ ಹಿಂದೂ ಭೂಮಿಯನ್ನು ನಿರ್ಮಿಸ ಲಾಗಿದೆ. 2005ರಿಂದ 2010 ರ ತನಕ ಗ್ರಾಮ ಪಂಚಾಯಿತಿ ಸದಸ್ಯನಾಗಿ ಸ್ಮಶಾನ ನಿರ್ಮಾಣದ ಕನಸು ಕಂಡಿದ್ದೆ. 2021ರಲ್ಲಿ ಸದಸ್ಯನಾಗಿ ಸ್ಮಶಾನ ನಿರ್ಮಾಣಕ್ಕೆ ವಿಶೇಷ ಯೋಜನೆಯನ್ನು ಸಿದ್ಧಪಡಿಸಿ ದಾನಿಗಳಲ್ಲಿ ಮೂಲಕ ಈ ಯೋಜನೆ ಇದೀಗ ಕಾರ್ಯಗತಗೊಂಡಿರುವುದು ಸಂತೋಷ ತಂದಿದೆ ಎಂದು ಚಂದ್ರಶೇಖರ ಶೆಟ್ಟಿ ನುಡಿದರು.

ಸಂತೇಕಟ್ಟೆಯ ಉದ್ಯಮಿಗಳಾದ ಎ.ಪ್ರಶಾಂತ್ ಕಾಮತ್ ಮತ್ತು ಮಾಧವ ಕಾಮತ್ ಅವರು ತಂದೆ ಆರ್ಬೆಟ್ಟು ವೆಂಕಟೇಶ ಕಾಮತ್‌ರ ನೆನಪಿನಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿಯನ್ನು ನಿರ್ಮಿಸಿಕೊಟ್ಟಿದ್ದಾರೆ. ಕಳ್ತೂರು ಗ್ರಾಪಂ ವತಿಯಿಂದ ಜಾಗದ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆ ಯನ್ನು ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ 2 ಲಕ್ಷ ರೂ. ಅನುದಾನ ನೀಡಿದ್ದಾರೆ.

ರುದ್ರಭೂಮಿಯಲ್ಲಿ ಈಗಾಗಲೇ ಒಂದು ಸಿಲಿಕಾನ್ ಛೇಂಬರ್ ಶೆಡ್‌ನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮತ್ತೊಂದು ಸಿಲಿಕಾನ್ ಛೇಂಬರ್ ಶೆಡ್‌ನ್ನು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ನಿರ್ಮಿಸಲಾಗುತ್ತದೆ. ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಅತೀ ಶೀಘ್ರವಾಗಿ ಇದು ನಿರ್ಮಾಣಗೊಳ್ಳಲಿದೆ.

ವಿಶಾಲ ಜಾಗದಲ್ಲಿ ದಿ.ಆರ್ಬೆಟ್ಟು ವೆಂಕಟೇಶ ಕಾಮತ್ ಹಿಂದೂ ರುದ್ರಭೂಮಿ ನಿರ್ಮಾಣಗೊಂಡಿದೆ. ಆವರಣ ಗೋಡೆ, ಸುತ್ತಲು ಗಿಡಗಳನ್ನು ನೆಡಲಾಗಿದೆ. ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿ ಸಕಲ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ. ಧಾರ್ಮಿಕ ಕೇಂದ್ರದ ಪರಿಕಲ್ಪನೆಯಲ್ಲೇ ರುದ್ರಭೂಮಿಯ ನಿರ್ಮಾಣ ವಾಗಿದೆ. ರುದ್ರಭೂಮಿಯ ಪ್ರವೇಶದ್ವಾರದಲ್ಲಿ ಕಾವಲುಗಾರನ ಪ್ರತಿಮೆ ನಿರ್ಮಿಸಲಾಗಿದೆ. ಎಡಬದಿ ಯಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ.

ಸ್ಮಶಾನ ಅಭಿವೃದ್ಧಿ ಸಮಿತಿ ನಿರ್ವಹಣೆ: ಸ್ಮಶಾನ ಅಭಿವೃದ್ಧಿ ಸಮಿತಿಯನ್ನು ನಿಯಮನುಸಾರ ನೊಂದಾವಣೆ ಮಾಡಲಾಗಿದ್ದು 38ನೇ ಕಳ್ತೂರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಸಮಿತಿಯೇ ಸ್ಮಶಾನವನ್ನು ನಿರ್ವಹಣೆ ಮಾಡಲಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

ಮಾರ್ಚ್ 8 ಲೋಕಾರ್ಪಣೆ: 38ನೇ ಕಳ್ತೂರು ಗ್ರಾಮ ಪಂಚಾಯಿತಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿ ಸಹಯೋಗ ದೊಂದಿಗೆ ಕಳ್ತೂರು ಸಂತೆಕಟ್ಟೆ ಕೊಂಬೆ ರಸ್ತೆಯಲ್ಲಿ ನಿರ್ಮಾಣಗೊಂಡ ಆರ್ಬೆಟ್ಟು ವೆಂಕಟೇಶ ಕಾಮತ್ ಸಾರ್ವಜನಿಕ ಹಿಂದೂ ರುದ್ರಭೂಮಿಯ ಉದ್ಘಾಟನೆ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ. ದಾನಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖರು ಭಾಗವಹಿಸುವರು ಎಂದು ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News