97ನೇ ಪ್ರಾದೇಶಿಕ ವಿಶೇಷ ಮಕ್ಕಳ ಪೋಷಕರ ಸಮಾವೇಶ ಉದ್ಘಾಟನೆ
ಉಡುಪಿ: ಸರಕಾರ, ಸಂಘ ಸಂಸ್ಥೆಗಳು, ದಾನಿಗಳ ಸಹಭಾಗಿತ್ವದಲ್ಲಿ ವಿಶೇಷ ಮಕ್ಕಳ ಬದುಕಿನಲ್ಲಿ ಪರಿವರ್ತನೆ ಮಾಡುವ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಬೇಕು. ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಮಾನ ಅವಕಾಶ ಕಲ್ಪಿಸಬೇಕು ಎಂದು ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಹೇಳಿದ್ದಾರೆ.
ಪೋಷಕರ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ(ಎನ್ಸಿಪಿಒ) ಪರಿವಾರ್, ಮಾಹೆ ವಿವಿ ಅಧೀನದ ಆಸರೆ ಚಾರಿಟೇಬಲ್ ಟ್ರಸ್ಟ್, ಹೈದರಾಬಾದಿನ ಮೌಲಾನಾ ಆಝಾದ್ ನ್ಯಾಷನಲ್ ಉರ್ದು ವಿವಿ ವತಿಯಿಂದ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಸೌಪರ್ಣಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕಾಲ ಆರು ರಾಜ್ಯಗಳ 97ನೇ ಪ್ರಾದೇಶಿಕ ವಿಶೇಷ ಮಕ್ಕಳ ಪೋಷಕರ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿಯಲ್ಲಿ ದಾನಿಗಳ ನೆರವಿನಿಂದ ಒಟ್ಟು 14 ವಿಶೇಷ ಶಾಲೆಗಳು ನಡೆಯುತ್ತಿವೆ. ಬ್ರಹ್ಮಗಿರಿಯಲ್ಲಿ ವಿಶೇಷ ಮಕ್ಕಳಿಗಾಗಿ ರಾಜ್ಯ ಸರಕಾರ, ನಗರಸಭೆ ಹಾಗೂ ಸಿಎಸ್ಆರ್ ನೆರವಿನಿಂದ 4ಕೋಟಿ ರೂ. ವೆಚ್ಚದಲ್ಲಿ ಸಮರ್ಥ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದರು.
ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ 25ವರ್ಷಕ್ಕಿಂತ ಮೇಲಿನ ವಿಶೇಷ ಮಕ್ಕಳ ಕೌಶಲ ತರಬೇತಿ ಕೇಂದ್ರಕ್ಕೆ ಕೊಡುಗೆ ನೀಡಿದ ಉದ್ಯಮಿ ಪುರುಷೋತ್ತಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪರಿವಾರ್ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಡಾ.ಸುದೀಪ್ ಗೋಯಲ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಶೆಟ್ಟಿ, ಮಾಹೆ ಎಂಸಿಎಚ್ಪಿ ಪ್ರೊಫೆಸರ್ ಮತ್ತು ಡೀನ್ ಡಾ.ಅರುಣ್ ಮಯ್ಯ, ಎಸ್ಆರ್ಎಸ್ ನಿರ್ದೇಶಕ ವಿದ್ಯಾವಂತ ಆಚಾರ್ಯ, ಜಿಲ್ಲಾ ದಿವ್ಯಾಂಗರ ಸಬಲೀಕರಣ ಅಧಿಕಾರಿ ರತ್ನಾ, ರೋಟರಿ ಜಿಲ್ಲೆ 3182ನಿಯೋಜಿತ ಗವರ್ನರ್ ಬಿ.ಎಂ.ಭಟ್, ಆಸರೆ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಶ್ರೀಧರ್ ಉಪಸ್ಥಿತರಿದ್ದರು.
ಸಮಾವೇಶ ಸಂಘಟನಾ ಸಮಿತಿ ಸದಸ್ಯ ಕೆ.ಎಸ್.ಜೈವಿಠ್ಠಲ್ ಸ್ವಾಗತಿಸಿ ದರು. ರಮೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಅರ್ಚನಾ ಟ್ರಸ್ಟಿನ ಟ್ರಸ್ಟಿ ಡಾ.ಪದ್ಮರಾಜ್ ಹೆಗ್ಡೆ ವಂದಿಸಿದರು.