ಮತ್ತೆ ಕೊರೋನಾ ಭೀತಿ; ಆತಂಕ ಬೇಡ, ಜಾಗೃತಿ ಇರಲಿ: ಜನತೆಗೆ ಸಚಿವ ಯು.ಟಿ. ಖಾದರ್ ಸಲಹೆ

Update: 2026-07-21 21:09 IST

ಬಾರಕೂರು, ಜು.21: ದೇಶದಲ್ಲಿ ಮತ್ತೆ ಕೊರೋನಾ ಭೀತಿ ಉಂಟಾಗಿದ್ದು, ಜನರು ಯಾವುದೇ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ, ಆದರೆ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.

ಬಾರಕೂರಿನಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಇದು ಸಾಂಕ್ರಾಮಿಕ ರೋಗದ ಕಾಲ. ಇದು ವೈರಲ್ ಫೀವರ್ ಸಮಯ. ಮಲೇರಿಯಾ, ಡೆಂಗಿ, ಎಚ್‌1ಎನ್‌1 ಮಳೆಗಾಲದಲ್ಲಿ, ತಂಪುವಾತಾವರಣದಲ್ಲಿ ಸಾಮಾನ್ಯ. ಆದ್ದರಿಂದ ಜನರು ಸ್ವಯಂಪ್ರೇರಿತವಾಗಿ ಜಾಗೃತರಾಗಿರಬೇಕು. ಆಹಾರ ಪದ್ಧತಿಯಲ್ಲಿ, ಕುಡಿಯುವ ನೀರಿನಲ್ಲಿ ಅವರು ಎಚ್ಚರವಹಿಸಬೇಕು.

ಪರೀಕ್ಷೆ ನಡೆಸುವಾಗ ಕೆಲವೊಂದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದು ಸಹಜ. ಅಷ್ಟಕ್ಕೆ ಆತಂಕ ಪಡಬಾ ರದು. ಸಾವಿರ ವರ್ಷ ಕಳೆದರೂ ಕೆಲವು ವೈರಸ್‌ಗಳು ಗಾಳಿಯಲ್ಲಿ, ಪರಿಸರದಲ್ಲಿ ಇದ್ದೇ ಇರುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ವೈರಸ್‌ಗಿಂತ ನಾವು ರೋಗ ನಿರೋಧಕ ಶಕ್ತಿ ಹೊಂದಿ ಗಟ್ಟಿಯಾಗಬೇಕು ಎಂದು ಸಚಿವರು ಹೇಳಿದರು.

ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ಸ್ವಚ್ಛತೆಯನ್ನು ರೂಢಿಸಿಕೊಳ್ಳುವಂತೆ ಅವರು ಜನರಿಗೆ ಸಲಹೆ ನೀಡಿದರು. ಡೆಂಗ್ಯೂ, ಎಚ್‌1ಎನ್‌1 ಹಾಗೂ ಕೋವಿಡ್ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ. ವಿಮಾನ ನಿಲ್ದಾಣಗಳಲ್ಲಿ ಅಗತ್ಯವಿರುವ ಟೆಸ್ಟಿಂಗ್ ಮತ್ತು ಸ್ಟ್ರೀನಿಂಗ್ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಜನಸಾಮಾನ್ಯರು ಹಾಗೂ ಸಂಘ-ಸಂಸ್ಥೆಗಳು ಸರ್ಕಾರ ದೊಂದಿಗೆ ಕೈಜೋಡಿಸಬೇಕು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ತಡೆಯಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರಸ್ತುತ ಇದು ಸಾಂಕ್ರಾಮಿಕ ರೋಗಗಳ ಕಾಲಘಟ್ಟ ವಾಗಿದ್ದು, ವೈರಲ್ ಫೀವರ್‌ಗಳ ಪ್ರಮಾಣ ಹೆಚ್ಚಾಗುವ ಸಮಯವಾಗಿದೆ. ಸೊಳ್ಳೆಗಳ ಉತ್ಪಾದನೆಯಿಂದ ಡೆಂಗಿ ಸೇರಿದಂತೆ ಹಲವು ರೋಗಗಳು ಹೆಚ್ಚಾಗುತ್ತಿವೆ. ಆದ್ದರಿಂದ ಜ್ವರ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಿಸಿ ನೀರು ಕುಡಿಯುವುದು ಸೇರಿದಂತೆ ಆರೋಗ್ಯ ಕಾಳಜಿಗೆ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.

ಡೆಂಗಿಗೆ ಲಸಿಕೆ ನೀಡಲು ಕೇಂದ್ರ ಸರಕಾರ ಅನುಮತಿ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವು ಕೂಡಾ ಈ ಕುರಿತು ಸಭೆ ನಡೆಸಿರುವುದಾಗಿ ಸಚಿವ ಖಾದರ್ ತಿಳಿಸಿದರು. ಡೆಂಗಿನ ಲಸಿಕೆ ಕುರಿ ತಂತೆ ನಾವಿನ್ನೂ ಪರಾಮರ್ಶೆ ನಡೆಸಬೇಕಾಗಿದೆ. ಲಸಿಕೆ ಅಗತ್ಯವಿದೆಯೇ, ಅದರ ಪರಿಣಾಮಗಳು ಏನು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆರೋಗ್ಯದ ಮೇಲೆ ಅದರ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಸ್ಪತ್ರೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೊನ್ನೆ 16ರಂದು ನಾವು ಇಲಾಖೆಯ ಉನ್ನತ ಮಟ್ಟದ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಚರ್ಚಿಸಿದ್ದೇವೆ. ಆದಷ್ಟು ಬೇಗನೇ ಆಸ್ಪತ್ರೆಗೆ ಬೇಕಾಗುವ ಉಪಕರಣ, ಫರ್ನಿಚರ್‌ಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಜಿಲ್ಲಾಸ್ಪತ್ರೆಗೆ ಚಾಲನೆ ನೀಡುತ್ತೇವೆ ಎಂದರು.

ಇದರೊಂದಿಗೆ ತಾಯಿ-ಮಕ್ಕಳ ಆಸ್ಪತ್ರೆಯ ಕುರಿತಂತೆಯೂ ಸಭೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News