ಹೆಜಮಾಡಿಯಲ್ಲಿ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸರ್ವಾಧ್ಯಕ್ಷರಾದ ಫಕೀರ್ ಮುಹಮ್ಮದ್ ಕಟ್ಪಾಡಿಯವರಿಗೆ ಅಧಿಕೃತ ಆಮಂತ್ರಣ
ಪಡುಬಿದ್ರಿ: ದೊಡ್ಡ ಪ್ರಶಸ್ತಿ, ಸನ್ಮಾನಗಳು ಸಿಕ್ಕರೂ, ನನ್ನೂರಿನಲ್ಲಿ ನನಗೆ ಸಮ್ಮೇಳನಾಧ್ಯಕ್ಷರ ಗೌರವ ಸಿಗುವುದು ಹೃದಯ ತುಂಬಿ ಬಂದಿದೆ ಎಂದು ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಗಾರ, ಸಾಮಾಜಿಕ ಹೋರಾಟಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಹೇಳಿದರು.
ಅವರು ಗುರುವಾರ ಕಟಪಾಡಿಯ ಸ್ವಗೃಹದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಸಮಿತಿಯ ವತಿಯಿಂದ ಅಧಿಕೃತವಾಗಿ ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಮಾತನಾಡಿದರು.
ನಮ್ಮೂರಿನ ಸನ್ನಿವೇಶಗಳು ಹಲವು ಕತೆಗಳಲ್ಲಿ ಅಡಕವಾದರೂ, ಕೆಲಸದ ನಿಮಿತ್ತ ದೂರದೂರಿನಲ್ಲಿದ್ದಾಗ ನಮ್ಮೂರಿನ ಶ್ರೇಷ್ಠತೆ ಅರಿವಾಗುತ್ತದೆ. ಉಡುಪಿ, ದ.ಕ ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ಹೊಸತಲ್ಲ. ಈಗಿನ ಮಕ್ಕಳಲ್ಲಿ ಕನ್ನಡದ ಬಗ್ಗೆ ಕೇಳಿದಾಗ "ಐ ಡೋಂಟ್ ನೋ ಕನ್ನಡ" ಹೇಳುವುದನ್ನು ಹೇಗೆ ಬದಲಾಯಿಸಬಹುದು ಅನ್ನುವ ಮಟ್ಟಿಗೆ ಕನ್ನಡದ ಕೆಲಸ ಮಾಡಬೇಕಾಗಿದೆ. ಕನ್ನಡದ ವೈಭವವನ್ನು ಮತ್ತೆ ಸ್ಥಾಪಿಸುವ ಬಗ್ಗೆ ಕಟಿಬದ್ಧರಾಗಬೇಕು ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಪು ಕಸಾಪ ವತಿಯಿಂದ ಫಕೀರ್ ಮುಹಮ್ಮದ್ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹೊಸ ತಾಲೂಕು ಆಗಿ ರಚನೆಯಾದಂದಿನಿಂದ ಸತತ 6 ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ 7ನೇ ಸಮ್ಮೇಳನ ನಡೆಸಲಿರುವ ಕಸಾಪ ಕಾಪು ಘಟಕವನ್ನು ಅಭಿನಂದಿಸಿದರು.
ಕೋಟೆ ಗ್ರಾ.ಪಂ.ಅಧ್ಯಕ್ಷೆ ಪ್ರಮೀಳಾ ಜತ್ತನ್ನ ಮಾತನಾಡಿ, ಕಟಪಾಡಿ ಗ್ರಾಮ ಪಂಚಾಯತ್ನ ಗ್ರಂಥಾಲಯವನ್ನು ಮಾದರಿ ಗ್ರಂಥಾಲಯವಾಗಿ ನಿರ್ಮಿಸುವಲ್ಲಿ ಫಕೀರ್ ಮುಹಮ್ಮದ್ರವರ ಕೊಡುಗೆ ಅನನ್ಯ,ಅವಿಸ್ಮರಣೀಯ ಎಂದರು.
ಕಾಪು ತಾಲೂಕು ಘಟಕದ ಅಧ್ಯಕ್ಷ ಬಂಟಕಲ್ ಪುಂಡಲೀಕ ಮರಾಠೆ ಇವರ ಅಧ್ಯಕ್ಷತೆಯಲ್ಲಿ ಆಮಂತ್ರಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಮೋಹನ ಸುವರ್ಣ, ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ಡಾ. ರಘು ನಾಯ್ಕ್, ಕಾಪು ಕಸಾಪ ಜೊತೆ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಕೆ.ಆರ್. ಪಾಟ್ಕರ್ ಬಂಟಕಲ್ಲು, ದೀಪಕ್ ಬೀರ ಪಡುಬಿದ್ರಿ, ಸಮಿತಿಯ ಸದಸ್ಯರುಗಳಾದ ಸತ್ಯಸಾಯಿ ಪ್ರಸಾದ್ ಬಂಟಕಲ್ಲು, ಭಾಸ್ಕರ ಕಾಮತ್ ಕಟಪಾಡಿ, ಫಕೀರ್ ಮುಹಮ್ಮದ್ ರವರ ಕುಟುಂಬಸ್ಥರು ಉಪಸ್ಥಿತರಿದ್ದರು.