ಕೊಲ್ಲೂರು ಬಳಿ ಟೆಂಪೋ-ಜೀಪು ನಡುವೆ ಢಿಕ್ಕಿ: ಮೃತರ ಸಂಖ್ಯೆ ಎರಡಕ್ಕೇರಿಕೆ, ಎಂಟು ಮಂದಿಗೆ ಗಾಯ
ಕುಂದಾಪುರ: ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ಮಧ್ಯೆ ಕೊಲ್ಲೂರು ದಳಿ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮತ್ತೋರ್ವ ಮೃತಪಟ್ಟಿದ್ದು, ಈ ಮೂಲಕ ಈ ಘಟನೆಯಲ್ಲಿ ಇಬ್ಬರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಕೇರಳದ ಜ್ಯೋತಿ(35) ಹಾಗೂ ಆರ್ಯ ಅನೂಪ್(28) ಎಂದು ಗುರುತಿಸಲಾಗಿದೆ. ಅಯನ್(5), ಅವನಿ(8), ಅರ್ಜುನ್(9), ಮಿನಿ(60), ಅಭಿ(36), ಅನೂಪ್(37), ಜ್ಯೋತಿಷ್(43), ಜೀಪು ಚಾಲಕ ದೇವರಾಜ್ ಎಂಬವರು ತೀವ್ರವಾಗಿ ಗಾಯಗೊಂಡು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರು ಕೇರಳ ರಾಜ್ಯದವರು ಎಂದು ತಿಳಿದುಬಂದಿದೆ.
ಕೊಡಚಾದ್ರಿಯಿಂದ ಕೊಲ್ಲೂರಿನತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಯತ್ತ ಸಾಗುತ್ತಿದ್ದ ಟೆಂಪೋ ಮಧ್ಯೆ ಈ ಅಪಘಾತ ನಡೆದಿದೆ.
ಕೊಲ್ಲೂರು ಠಾಣೆ ಪಿಎಸ್ಐಗಳಾದ ವಿನಯ್ ಎಂ.ಕೊರ್ಲಹಳ್ಳಿ, ಭೀಮಾ ಶಂಕರ್ ಸ್ಥಳಕ್ಕೆ ಹಾಗೂ ಗಾಯಾಳುಗಳಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.