ಕೊಲ್ಲೂರು | ಟೆಂಪೋ-ಜೀಪು ನಡುವೆ ಢಿಕ್ಕಿ: ಕೇರಳದ ಓರ್ವ ಮೃತ್ಯು, ಹಲವರಿಗೆ ಗಾಯ
Update: 2026-05-17 18:16 IST
ಕುಂದಾಪುರ: ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ಮಧ್ಯೆ ಕೊಲ್ಲೂರು ದಳಿ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಕೊಡಚಾದ್ರಿಯಿಂದ ಕೊಲ್ಲೂರಿನತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಯತ್ತ ಸಾಗುತ್ತಿದ್ದ ಟೆಂಪೋ ಮಧ್ಯೆ ಈ ಅಪಘಾತ ನಡೆದಿದೆ. ಮೃತರು ಹಾಗೂ ಗಾಯಾಳುಗಳು ಕೇರಳ ಮೂಲದವರೆಂದು ಸದ್ಯ ತಿಳಿದುಬಂದಿದೆ.
ಕೊಲ್ಲೂರು ಠಾಣೆ ಪಿಎಸ್ಐಗಳಾದ ವಿನಯ್ ಎಂ.ಕೊರ್ಲಹಳ್ಳಿ, ಭೀಮಾಶಂರ್ಕ ಸ್ಥಳಕ್ಕೆ ಹಾಗೂ ಗಾಯಾಳುಗಳಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.