×
Ad

ಅಕ್ರಮ, ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ ಬ್ರಹ್ಮಾಸ್ತ್ರ

ಮೇ 21ರಂದು ನಾಗರಮಠಕ್ಕೆ ಉನ್ನತ ಮಟ್ಟದ ತಜ್ಞರ ತನಿಖಾ ತಂಡ

Update: 2026-05-20 21:20 IST

ಉಡುಪಿ, ಮೇ 20: ಬ್ರಹ್ಮಾವರ ತಾಲೂಕು ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆ ಪ್ರಕರಣ ಈಗ ಕರ್ನಾಟಕ ಲೋಕಾಯುಕ್ತದ ಮೆಟ್ಟಲೇರಿದ್ದು, ಇಡೀ ಅಕ್ರಮದ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ತಂಡವೊಂದು ಗುರುವಾರ ನಾಗರಮಠಕ್ಕೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ನಡೆದಿರುವ ದೊಡ್ಡಮಟ್ಟದ ಅಕ್ರಮ ಮರಳುಗಾರಿಕೆಯ ಕುರಿತಂತೆ ವಿಸ್ತೃತ ತನಿಖೆ ನಡೆಸು ವಂತೆ ಕರ್ನಾಟಕ ಲೋಕಾಯುಕ್ತ ಶುಕ್ರವಾರ ಆದೇಶ ಹೊರಡಿಸಿದೆ. ಈ ಕುರಿತು ಬೆಂಗಳೂರಿನಲ್ಲಿ ನಡೆಸಿದ ಪ್ರಾಥಮಿಕ ವಿಚಾರಣೆಯ ವೇಳೆ ಈ ಮರಳುಗಾರಿಕೆಯಲ್ಲಿ ಗಂಭೀರ ಸ್ವರೂಪದ ಪರಿಸರ ಮಾಲಿನ್ಯ, ಪರಿಸರ ಕಾನೂನುಗಳ ಉಲ್ಲಂಘನೆ ಹಾಗೂ ಮರಳುಗಾರಿಕಾ ಚಟುವಟಿಕೆಗಳ ಮೇಲೆ ನಿಗಾ ವಹಿಸುವಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತಂತೆ ಸಮಗ್ರ ತನಿಖೆಗೆ ಲೋಕಾಯುಕ್ತರು ಆದೇಶ ನೀಡಿದ್ದಾರೆ.

ಅಕ್ರಮ ಹಾಗೂ ಅವೈಜ್ಞಾನಿಕ ಮರಳುಗಾರಿಕೆಯಿಂದ ಪರಿಸರದ ಮೇಲಾಗಿರುವ ಹಾನಿ, ಸರಕಾರಕ್ಕಾದ ಆರ್ಥಿಕ ನಷ್ಟ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದ ಪ್ರಮಾಣವನ್ನು ಕಂಡುಕೊಳ್ಳಲು ಲೋಕಾಯುಕ್ತರು ಬಹು ಇಲಾಖೆ ಗಳ ತಜ್ಞರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲು ಆದೇಶ ಹೊರಡಿಸಿದ್ದಾರೆ. ಈ ತನಿಖಾ ತಂಡದಲ್ಲಿ ಪರಿಸರ ಇಂಜಿನಿಯರಿಂಗ್, ಭೂವಿಜ್ಞಾನ, ಅರಣ್ಯ, ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಲೋಕಾಯುಕ್ತ ಪೊಲೀಸರು ಇರುತ್ತಾರೆ.

ಈ ತನಿಖಾ ತಂಡ ಮೇ 21ರಂದು ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ನಾಗರಮಠದಲ್ಲಿ ಸ್ಥಳ ತನಿಖೆ ನಡೆಸು ವಂತೆ ಲೋಕಾಯುಕ್ತರು ನಿದೇಶನ ನೀಡಿದ್ದಾರೆ. ತಂಡಕ್ಕೆ ಜೂ.16ರೊಳಗೆ ಸಮಗ್ರ ವರದಿಯೊಂದನ್ನು ಸಲ್ಲಿಸು ವಂತೆ ತಿಳಿಸಲಾಗಿದ್ದು, ಜೂನ್ 20ರಂದು ಪ್ರಕರಣದ ಮುಂದಿನ ವಿಚಾರಣೆಗೆ ದಿನ ನಿಗದಿ ಪಡಿಸಲಾಗಿದೆ. ವರದಿಯ ಪ್ರತಿಗಳನ್ನು ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಕಳುಹಿಸು ವಂತೆಯೂ ಸೂಚಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತರ ಎ.23ರ ಆದೇಶದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ಗ್ರಾಮಸ್ಥರಿಂದ ಬಂದ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳ ಪರಿಶೀಲನೆ ನಡೆದಿದ್ದು, ಮೊದಲ ಪ್ರತಿವಾದಿಗಳಾದ ಉಡುಪಿ ಜಿಲ್ಲಾಧಿಕಾರಿ ಅವರು ಆಡಳಿತಾತ್ಮಕ ಕಾರಣ ಗಳನ್ನು ನೀಡಿ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದು, ಅವರ ಪರವಾಗಿ ಉಡುಪಿ ಜಿಲ್ಲೆಯ ಹಿರಿಯ ಭೂವಿಜ್ಞಾನಿ ವಿಂಧ್ಯಾ ಅವರು ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದರು. ದೂರು ನೀಡಿದ ಗ್ರಾಮಸ್ಥರ ಪರವಾಗಿ ಗಣೇಶ್ ಶೆಟ್ಟಿ ಅವರು ಹಾಜರಿದ್ದರು.

ದೂರಿನ ಆರೋಪಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಈ ಮೊದಲೇ ನಿರ್ದೇಶನ ನೀಡಲಾಗಿದ್ದರೂ, ಅವರು ಯಾವುದೇ ವರದಿಯನ್ನು ಸಲ್ಲಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ಅಧಿಕಾರಿಗಳು, ಅಕ್ರಮ ಮರಳುಗಾರಿಕೆ ಎಂಬುದು ‘ಪ್ರಮುಖ ರ್ಯಾಕೆಟ್’ ಆಗಿದೆ ಎಂದು ಕೆಂಡ ಕಾರಿತು. ದೂರಿನಲ್ಲಿ ಮಾಡಲಾದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಉಡುಪಿ ಜಿಲ್ಲಾಧಿಕಾರಿ ತಮ್ಮ ವರದಿಯನ್ನು ಸಲ್ಲಿಸಬೇಕಾಗಿತ್ತು. ಏಕೆಂದರೆ ಈ ವಿಷಯ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ್ದಾಗಿದ್ದು, ಇದು ರಾಜ್ಯದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಒಂದು ದೊಡ್ಡ ದಂಧೆ ಮತ್ತು ಹಗರಣವಾಗಿದೆ ಎಂದು ಹೇಳಿತ್ತು.

ಅಕ್ರಮ ಮರಳುಗಾರಿಕೆ ಕುರಿತಂತೆ ಮಾಡಲಾದ ಆರೋಪ ಹಾಗೂ ಮರಳು ಗಣಿಗಾರಿಕೆಯ ಬಗ್ಗೆ ಮೂಡಿಬಂದಿ ರುವ ಆತಂಕಕಾರಿ ಚಿತ್ರಣವನ್ನು ಗಮನಿಸಿ, ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತರು ಉಡುಪಿ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅದರಂತೆ, ಕಳೆದ ಎಪ್ರಿಲ್ 27ರಂದು ವರದಿಯೊಂದನ್ನು ಸಲ್ಲಿಸಿದ್ದರು.

ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಾ ನಾಯ್ಕ್ ಅವರು ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ಭೇಟಿ ನೀಡಿ ಮರಳುಗಾರಿಕೆಯಲ್ಲಿ ಹಲವು ರೀತಿಯ ಅಕ್ರಮಗಳನ್ನು ಪತ್ತೆ ಹಚ್ಚಿತ್ತು. ನಿಗದಿತ ಸ್ಥಳವನ್ನು ಮೀರಿ ಮರಳು ಗಾರಿಕೆ, ಪರವಾನಿಗೆಯಲ್ಲಿ ಉಲ್ಲೇಖಿಸಿದಕ್ಕಿಂತ ಆಳದಲ್ಲಿ ಮರಳುಗಾರಿಕೆ ನಡೆಸುವ ಮೂಲಕ ಪರಿಸರಕ್ಕೆ ಅಪಾರ ಹಾನಿ ಮಾಡಿರುವು ದನ್ನು ಕಂಡುಕೊಳ್ಳಲಾಗಿತ್ತು. ಅದರಿಂದ ಜನರಿಗಾದ ಗಂಭೀರ ಸಮಸ್ಯೆ ಕುರಿತಂತೆಯೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸ್ಥಳದಲ್ಲಿ ಹಲವಾರು ಅಕ್ರಮಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಉಡುಪಿ ಜಿಲ್ಲೆಯ ಹಿರಿಯ ಭೂವಿಜ್ಞಾನಿ ಅವರು ವಿಚಾರಣೆಗೆ ಹಾಜರಾದರೂ ಮತ್ತು ಆರೋಪಗಳ ಗಂಭೀರತೆಯ ಅರಿವಿದ್ದರೂ, ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ವಿವಿಧ ಅಕ್ರಮಗಳು ಮತ್ತು ಕಾನೂನುಬಾಹಿರ ಅಂಶಗಳ ಕುರಿತು ಸ್ವತಂತ್ರವಾಗಿ ಸ್ಥಳ ಪರಿಶೀಲನೆ ನಡೆಸಿಲ್ಲ. ಅಲ್ಲದೇ, ಉಡುಪಿ ಜಿಲ್ಲಾಧಿಕಾರಿ ಅವರೂ ಇದನ್ನು ಪರಿಶೀಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅನುಮತಿಸಲಾದ ಪ್ರದೇಶವನ್ನು ಮೀರಿ, ನದಿ ಪಾತ್ರವನ್ನು ಆಳವಾಗಿ ಅಗೆಯುವ ಮೂಲಕ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬುದು ಮುಖ್ಯ ಆರೋಪವಾಗಿದೆ. ಇದು ಪರಿಸರ ಸಮತೋಲನ ಹಾಗೂ ಖಾಸಗಿ ಜಮೀನುಗಳ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುತ್ತಿದೆ. ಲೋಕಾಯುಕ್ತ ಪೊಲೀಸರ ವರದಿಯಲ್ಲಿ, ಮರಳು ಗಣಿಗಾರಿಕೆ ನಡೆಯಬೇಕಾದ ಗಡಿಯನ್ನು ನೀರಿನ ಬಲೂನ್‌ಗಳನ್ನು ಇರಿಸುವ ಮೂಲಕ ಗುರುತಿಸಲಾಗಿ ದ್ದರೂ, ಸುಮಾರು 300ಮೀ.ಗಿಂತಲೂ ಹೆಚ್ಚಿನ ದೂರದಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ ನಡೆಯು ತ್ತಿದೆ ಮತ್ತು ಮರಳು ತರಲು ದೋಣಿಗಳನ್ನು ಬಳಸಲಾಗುತ್ತಿದೆ. ನದಿಯ ದಂಡೆಯಿಂದ ಸುಮಾರು 10 ಅಡಿ ದೂರದ ವ್ಯಾಪ್ತಿಯಲ್ಲೇ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದೂ ವರದಿಯಲ್ಲಿ ನಮೂದಿಸಲಾಗಿದೆ. ಯಾವುದೇ ದೋಣಿಗೂ ಜಿ.ಪಿ.ಎಸ್ ಅಳವಡಿಸಿಲ್ಲ ಮತ್ತು ಇಲಾಖೆಯ ಯಾವುದೇ ಅಧಿಕಾರಿ ಈ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸದ ಕಾರಣ, ಸಾಗಣೆದಾರರಿಗೆ ಯಾವುದೇ ಹೊಣೆಗಾರಿಕೆ ಇಲ್ಲದಂತಾಗಿದೆ ಎಂದು ದೂರಲಾಗಿದೆ.

ಶುಕ್ರವಾರ ಲೋಕಾಯುಕ್ತರ ಮುಂದೆ ಹಾಜರಾದ ದೂರುದಾರರು ಕೆಲವು ಛಾಯಾಚಿತ್ರಗಳನ್ನು ಹಾಜರುಪಡಿಸುವ ಮೂಲಕ, ನದಿಯ ಹರಿನಲ್ಲಿ ರೂಪುಗೊಂಡ ದ್ವೀಪಗಳನ್ನೂ ಸಹ ಗುರಿಯಾಗಿಸಿಕೊಂಡು, ಅಕ್ರಮ ಮರಳು ಗಣಿಗಾರಿಕೆಯ ಪ್ರಕ್ರಿಯೆಯಲ್ಲಿ ಅವುಗಳನ್ನು ನಾಶಪಡಿಸಲಾಗುತ್ತಿದೆ ಎಂದು ತೋರಿಸಿದ್ದಾರೆ. ಪರಿಸರ ಮತ್ತು ನೈಸರ್ಗಿಕ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಿಯಮ ಮತ್ತು ನಿಬಂಧನೆಗಳನ್ನು ಗಾಳಿಗೆ ತೂರಿ ಬೃಹತ್ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಪರವಾನಗಿ ದಾರರೊಂದಿಗೆ ಶಾಮೀಲಾಗದ ಹೊರತು ಇದು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆಯ ಜಿಲ್ಲಾಧಿಕಾರಿಯಾಗಲಿ ಅಥವಾ ಲೋಕಾಯುಕ್ತರ ಮುಂದೆ ಹಾಜರಾದ ಉಡುಪಿಯ ಹಿರಿಯ ಭೂವಿಜ್ಞಾನಿ ಯಾಗಲಿ ಅಕ್ರಮ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ವಾಸ್ತವವನ್ನು ಖಚಿತಪಡಿಸಿ ಕೊಳ್ಳಲು, ಉಂಟಾಗಿ ರುವ ಹಾನಿ ಮತ್ತು ನಷ್ಟವನ್ನು ಅಂದಾಜು ಮಾಡಲು, ಉಲ್ಲಂಘನೆಯ ವ್ಯಾಪ್ತಿಯನ್ನು ಪತ್ತೆಹಚ್ಚಲು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ತಪ್ಪು ಮಾಡಿದ ವ್ಯಕ್ತಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ವಿವರವಾದ ತನಿಖೆಯ ಅಗತ್ಯವಿದೆ ಎಂದು ಲೋಕಾಯುಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News