ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆ | ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಆ.28: ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ವ್ಯವಸ್ಥೆಯನ್ನು ರಾಜ್ಯದ ಮೈಸೂರು ವಿಭಾಗಕ್ಕೆ ಸೇರಿಸುವುದರ ವಿರುದ್ಧ ಕೇರಳ ಸರಕಾರ ಮತ್ತು ಅಲ್ಲಿನ ಸಂಸದರು ಎಷ್ಟೇ ವಿರೋಧಿಸಿದರೂ ನಮ್ಮ ನಿಲುವಿನಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದು ಕೇವಲ ಕರಾವಳಿ ಭಾಗದ ಪ್ರಶ್ನೆಯಲ್ಲ, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುತ್ತದೆ. ನಮ್ಮ ಭಾಗದ ರೈಲ್ವೆ ಅಭಿವೃದ್ಧಿಗೂ ಇದರಿಂದ ಬಹದೊಡ್ಡ ಕೊಡುಗೆ ಆಗಲಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸದ್ಯ ಕೇಂದ್ರ ಸರಕಾರ ಈ ಆದೇಶವನ್ನು ಅಧಿಕೃತವಾಗಿ ನೀಡಿದ್ದು, ಇದರಲ್ಲಿ ರಾಜ್ಯ ಸರಕಾರದ ಯಾವುದೇ ಪಾತ್ರದ ಇಲ್ಲದಿದ್ದರೂ, ಮೋದಿ ಸರಕಾರ ರೈಲ್ವೇ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯದ ಅವಕಾಶ ಮಾಡಿಕೊಟ್ಟಿದೆ. ಈ ಮಧ್ಯೆ ಸಚಿವ ಸೋಮಣ್ಣ, ಕೇರಳ ಸರಕಾರದ ಬೆದರಿಕೆಗೆ ಇಲಾಖೆ ಮಣಿಯುವುದಿಲ್ಲ ಹಾಗೂ ಕರ್ನಾಟಕ ರಾಜ್ಯದ ಜನ ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆ ಭಾರತೀಯ ರೈಲ್ವೆ ಜೊತೆಗೆ ವಿಲೀನ, ರೈಲ್ವೆ ಹಳಿ ಡಬಲಿಂಗ್, ಹೊಸ ರೈಲು ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಕುರಿತು ನಮ್ಮ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.