×
Ad

ಕೂಡಲೇ ಕಾರ್ಕಳ ತಾಲೂಕು ಕೆಡಿಪಿ ಸಭೆ ಕರೆಯಲು ಎಂ.ಪಿ.ಮೊಯ್ದಿನಬ್ಬ ಆಗ್ರಹ

Update: 2026-06-22 14:44 IST

ಕಾರ್ಕಳ, ಜೂ.22: ರಾಜ್ಯ ಸರಕಾರವು ಕಾರ್ಕಳ ತಾಲೂಕು ಕೆಡಿಪಿ ಸದಸ್ಯರ ನೇಮಕಾತಿ ಮಾಡಿ ಹಲವು ತಿಂಗಳುಗಳೇ ಕಳೆದಿದ್ದರೂ ಈ ಸಮಿತಿಯ ಅಧ್ಯಕ್ಷರಾದ ಕಾರ್ಕಳ ಶಾಸಕರು ಇದುವರೆಗೆ ಸಭೆ ಕರೆದಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಶಾಸಕರು ತಕ್ಷಣ ಕೆಡಿಪಿ ಸಭೆ ಕರೆದು ಕ್ಷೇತ್ರದ ಪ್ರಗತಿಯ ಬಗ್ಗೆ ಚರ್ಚೆ ನಡೆಸಬೇಕು ಕಾಂಗ್ರೆಸ್ ಮುಖಂಡ, ಕೆಡಿಪಿ ಸಮಿತಿ ಸದಸ್ಯ ಎಂ.ಪಿ.ಮೊಯ್ದಿನಬ್ಬ ಅಗ್ರಹಿಸಿದರು

ಕಾರ್ಕಳ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳನ್ನು ಸುಮಾರು 33ಕ್ಕೂ ಹೆಚ್ಚು ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ. ಆ ಕಾರ್ಯಕ್ರಮ, ಯೋಜನೆಗಳ ಪ್ರಗತಿಯನ್ನು ಸಮಯಾನುಸಾರ ಪರಿಶೀಲಿಸಿ ಪರಿಣಾಮಕಾರಿಯಾಗಿ ಅನುಷ್ಠಾ ಮಾಡುವಂತಾಗಲು ಪ್ರಗತಿ ಪರಿಶೀಲನಾ ಸಭೆ ತೀರಾ ಅಗತ್ಯವಾಗಿದೆ. ಆದರೆ ಕಾರ್ಕಳ ಶಾಸಕರು ಆ ಸಮಿತಿಯ ಅಧ್ಯಕ್ಷರಾಗಿ ಈ ಕೆಲಸವನ್ನು ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇವಲ ಶಾಸಕರೊಬ್ಬರೇ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು, ಸರಕಾರದಿಂದ ನಾಮ ನಿರ್ದೇಶಿತರಾದ ಸದಸ್ಯರ ಅವಾಗಣನೆ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಸರಕಾರದ ಯೋಜನೆ ಕಾರ್ಯಕ್ರಮಗಳು ನನ್ನ ಇಚ್ಛೆಗೆ ಅನುಗುಣವಾಗಿ ನಡೆಯಬೇಕು ಎಂಬ ದೋರಣೆ ಸರಿಯಲ್ಲ. ಸರಕಾರದಿಂದ ನಾಮನಿರ್ದೇಶನ ಗೊಂಡವರಿಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಎಂಬುವುದನ್ನು ಶಾಸಕರ ಗಮನಕ್ಕೆ ತರ ಬಯಸುತ್ತೇವೆ ಎಂದರು.

ಕೆಡಿಪಿ ಸಭೆಯ ನಿರ್ಲಕ್ಷ್ಯದ ಪರಿಣಾಮಕ್ಕೆ ಅತೀ ದೊಡ್ಡ ಉದಾಹರಣೆ ಸರಕಾರಿ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿಗಳ ನೇಮಕಾತಿ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೆ ಎನ್ನುವ ಅನೇಕ ದೂರುಗಳು ಬಂದಿದ್ದವು. ಒಂದು ವೇಳೆ ಕೆಡಿಪಿ ಸಭೆ ಕರೆದಿದ್ದರೆ ಈ ಬಗ್ಗೆ ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದಿತ್ತು. ಈ ಬಗ್ಗೆ ಶಾಸಕರ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತದೆ. ಯಾಕೆಂದರೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಒಂದೇ ದಿನ ವೈದ್ಯರ ನೇಮಕವಾಗುತ್ತದೆ. ಆದರೆ ಕಳೆದ 22 ವರ್ಷಗಳಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸುವ ಶಾಸಕರಿಂದ ಇದು ಯಾಕೆ ಸಾಧ್ಯವಾಗಲಿಲ್ಲ ಎಂದು ಮೊಯ್ದಿನಬ್ಬ ಪ್ರಶ್ನಿಸಿದರು.

ಸಭೆಯಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಅಮಿತಾ ಶೆಟ್ಟಿ ಸಾಣೂರು, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News