ಜ.26ರಂದು ಕೋಟದಲ್ಲಿ ಮಿಗ್-21ರ ಬಳಿ ಯೋಧರೊಂದಿಗೆ ಹೆಜ್ಜೆ: ಸಂಸದ ಕೋಟ
ಉಡುಪಿ, ಜ.22: ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದಲ್ಲಿ ನಿಲ್ಲಿಸಲಾದ ಮಿಗ್-21 ಯುದ್ಧ ವಿಮಾನದ ಬಳಿ ಯೋಧರ ಸಮಾಗಮ ನಡೆಯಲಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 09:30ಕ್ಕೆ ಕೋಟ ಅಮೃತೇಶ್ವರಿ ದೇವಸ್ಥಾನದ ಆವರಣ ದಿಂದ 200ಕ್ಕೂ ಅಧಿಕ ಸಂಖ್ಯೆಯ ಯೋಧರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಕಾಲ್ನಡಿಗೆಯಲ್ಲಿ ಮಿಗ್-21 ಯುದ್ಧವಿಮಾನದ ಆವರಣ ತಲುಪಲಿ ದ್ದಾರೆ. ಯೋಧರೊಂದಿಗೆ ಹೆಜ್ಜೆ ಹಾಕಲು ಯುವಕರು, ಸಂಘ ಸಂಸ್ಥೆ ಗಳ ಮುಖ್ಯಸ್ಥರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಸಂಸದ ಕೋಟ ಮನವಿ ಮಾಡಿದ್ದಾರೆ.
ಸುಮಾರು 63 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನವಾಗಿ ಕರ್ತವ್ಯ ನಿರ್ವಸಿದ ಮಿಗ್-21, ಕಾರ್ಗಿಲ್ ಯುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದು, ಕೇಂದ್ರ ಸರಕಾರದ ರಕ್ಷಣಾ ಇಲಾಖೆಯು, ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತ ಥೀಂ ಪಾರ್ಕಿಗೆ ಮಿಗ್-21ನ್ನು ಕೊಡುಗೆಯಾಗಿ ನೀಡಿದೆ.
ಗಣರಾಜ್ಯೋತ್ಸವದ ದಿನ ಮಿಗ್-21ರ ಬಳಿ ಧ್ಯಜಾರೋಹಣಾ ನಡೆಯಲಿದ್ದು, ಈ ಸಂಭ್ರಮದಲ್ಲಿ ಎಲ್ಲರೂ ಭಾಗವಹಿ ಸುವಂತೆ ಸಂಸದ ಕೋಟ ಕೋರಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ ಇವರ ಸಹಯೋಗದಲ್ಲಿ ಯೋಧರೊಂದಿಗೆ ಹೆಜ್ಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯೋಧರ ಕಾಲ್ನಡಿಗೆಯಲ್ಲಿ ನಿವೃತ್ತ ಮೇಜರ್ ಜನರಲ್ ಎಂ.ಭಟ್, ನಿವೃತ್ತ ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ನಿವೃತ್ತ ಕಮೊಡರ್ ಅತುಲ್ ಕುಮಾರ್ ರಸ್ತೋಗಿ ಮತ್ತು ಹಿರಿಯ ಸೇನಾನಿಗಳು ಭಾಗವಹಿಸಲಿ ದ್ದಾರೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.