ಕೊಲ್ಲೂರಿಗೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್; ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ
ಕೊಲ್ಲೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ವಿಜಯ್ ರಸ್ತೆ ಮಾರ್ಗದ ಮೂಲಕ ಉಡುಪಿ ಮೂಲಕ ಕೊಲ್ಲೂರಿಗೆ ಆಗಮಿಸಿದರು. ರಸ್ತೆಯುದ್ದಕ್ಕೂ ಕಾದು ಕುಳಿತ ಅಭಿಮಾನಿಗಳಿಗೆ ಕೈಬೀಸುತ್ತ ತೆರಳಿದ ಅವರು ಮಧ್ಯಾಹ್ನ ಕೊಲ್ಲೂರು ತಲುಪಿದರು. ವಿಜಯ್ ಆಗಮನದ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕೊಲ್ಲೂರು ದೇವಸ್ಥಾನದಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಭಕ್ತರು, ಅಭಿಮಾನಿಗಳು ವಿಜಯ್ ಅವರಿಗಾಗಿ ಕಾತರದಿಂದ ಕಾಯುತ್ತಿದ್ದರು. ಅವರನ್ನು ಕಾಣಲು ಮಳೆಯ ನಡುವೆಯೂ ಮರ, ಕಟ್ಟಡಗಳ ಮೇಲೆ ಸುಮಾರು ಎರಡು ಗಂಟೆಗೆ ಮೊದಲೇ ಅಭಿಮಾನಿಗಳು ಹತ್ತಿ ಕುಳಿತು ಕಾಯುತ್ತಿದ್ದರು.
ವಿಜಯ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಟಿವಿಕೆ ಪಕ್ಷದ ಚಿಹ್ಮೆ ವಿಷಲ್ ಊದಿ, ಘೋಷಣೆ ಕೂಗಿ ಸ್ವಾಗತಿಸಿದರು. ದಳಪತಿ ವಿಜಯ್, ಜನ ನಾಯಗನ್ ವಿಜಯ್ಗೆ ಜೈಕಾರ ಹಾಕಿದರು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರ ಹರಸಾಹಸ ಪಟ್ಟರು. ಅದು ಸಾಧ್ಯವಾಗದೆ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಿದರು.
ಬಳಿಕ ವಿಜಯ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಸ್ವಾಗತಿಸಿದರು. ಬಳಿಕ ಮೂಕಾಂಬಿಕೆಯ ದರ್ಶನ ಪಡೆದರು. ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತ ಬಿಗಿ ಬಂದೋಬಸ್ಥ್ ಏರ್ಪಡಿಸ ಲಾಗಿದೆ. ಝೆಡ್ ಪ್ಲಸ್ ಭದ್ರತೆ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದರು.