×
Ad

ಉಡುಪಿ: ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ವೀಕ್ಷಿಸಿದ ಸಚಿವ ಯು.ಟಿ. ಖಾದರ್

ಹಾಜಿ ಅಬ್ದುಲ್ಲಾ ತಾಯಿಮಕ್ಕಳ ಆಸ್ಪತ್ರೆ ಬಗ್ಗೆ 16ರಂದು ಬೆಂಗಳೂರಿನಲ್ಲಿ ಸಭೆಗೆ ನಿರ್ಧಾರ

Update: 2026-07-12 21:36 IST

ಉಡುಪಿ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂದು ಉಡುಪಿಗೆ ಆಗಮಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರು, ಅಜ್ಜರಕಾಡಿನಲ್ಲಿ ಈಗಿನ ಜಿಲ್ಲಾಸ್ಪತ್ರೆ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ನೂತನ ಕಟ್ಟಡಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿ ಇಡೀ ಯೋಜನೆಯ ಕುರಿತು ಸಮಗ್ರ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿ ಸೇರಿದ್ದ ಹೊರರೋಗಿಗಳು ಹಾಗೂ ಒಳರೋಗಿಗಳ ಜೊತೆ ಸಂವಾದ ನಡೆಸಿದರು. ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ, ಅಲ್ಲಿನ ವ್ಯವಸ್ಥೆ, ವೈದ್ಯರು ನೀಡುವ ಚಿಕಿತ್ಸೆ, ಸಿಗುತ್ತಿರುವ ಔಷಧಿಗಳ ಕುರಿತು ವಿವರಗಳನ್ನು ಕೇಳಿ ಪಡೆದುಕೊಂಡರು. ಹೆಚ್ಚಿನ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯ, ಇಲ್ಲಿನ ವ್ಯವಸ್ಥೆಯ ಕುರಿತು ಮಚ್ಚಗೆ ವ್ಯಕ್ತಪಡಿಸಿದರು.

ಸಚಿವರೊಂದಿಗೆ ಇದ್ದ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಅವರಿಂದ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಂದಲೂ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡರು. ಬಳಿಕ ಸಚಿವ ಖಾದರ್ ಅವರು ಉಡುಪಿ ನಗರಸಭೆಯ ಎದುರಿಗಿರುವ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿ ಅಲ್ಲಿ ಹೆರಿಗೆಗಾಗಿ ದಾಖಲಾಗಿರುವ ಮಹಿಳೆಯರ ಬಳಿ ವಿವಿಧ ಮಾಹಿತಿಗಳನ್ನು ಪಡೆದುಕೊಂಡರು.

ಬಳಿಕ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಯಿತು. ಇದರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಅಲ್ಲದೇ, ಆಸ್ಪತ್ರೆಯ ಎಲ್ಲಾ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಇಲಾಖೆಯ ಹಿರಿಯ ವೈದ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸರ್ಜನ್ ಅವರು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 150ಕ್ಕೂ ಅಧಿಕ ಹೆರಿಗೆ ನಡೆಯುತ್ತಿದೆ ಎಂದು ತಿಳಿಸಿದರಲ್ಲದೇ, ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 700ರಿಂದ 800 ಮಂದಿ ಹಾಗೂ ಸೋಮವಾರದಂತೆ ಸುಮಾರು 900 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ ಎಂದು ತಿಳಿಸಿದರು.

ಸಚಿವರು ಆಸ್ಪತ್ರೆಯ ವೈದ್ಯರು, ವೈದ್ಯಾಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಜೊತೆ ಅವರ ಸಮಸ್ಯೆ, ಕುಂದುಕೊರತೆಗಳ ಕುರಿತು ವಿಚಾರಿಸಿದರು.

ತಾಯಿ-ಮಕ್ಕಳ ಆಸ್ಪತ್ರೆ ಬಗ್ಗೆ 16ರಂದು ನಿರ್ಧಾರ: ಯು.ಟಿ.ಖಾದರ್

ಜಿಲ್ಲಾಸ್ಪತ್ರೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ, ಖಾಲಿಯಾಗುವ ಈಗಿನ ಜಿಲ್ಲಾಸ್ಪತ್ರೆಗೆ ಈಗ ನಗರದಲ್ಲಿ ಕಾರ್ಯನಿರ್ವಹಿಸುವ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯನ್ನು ಸ್ಥಳಾಂತರಿಸಬಹುದು ಎಂದು ಸಚಿವ ಯು.ಟಿ.ಖಾದರ್ ಸಲಹೆ ನೀಡಿದರು. ದೂರದಲ್ಲಿರುವ ತಾಯಿಮಕ್ಕಳ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯನ್ನು ನಿಭಾಯಿಸಲು ಎದುರಾಗುತ್ತಿರುವ ಸಮಸ್ಯೆ, ನಿರ್ವಹಣಾ ವೆಚ್ಚಗಳ ಕುರಿತು ಸಚಿವರ ಗಮನ ಸೆಳೆದಾಗ ಅವರಿಂದ ಈ ಸಲಹೆ ಬಂತು.

ಇದಕ್ಕೆ ಹೆಚ್ಚಿನ ವೈದ್ಯರು ಸಹಮತ ಸೂಚಿಸಿದರು ಎಂದು ತಿಳಿದುಬಂದಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಬಗ್ಗೆ ಮತ್ತು ಕಟ್ಟಡದ ದುರಸ್ತಿಗಳ ಕುರಿತು ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡರು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎದುರಿಗೆ ಬೃಹತ್ ಆಸ್ಪತ್ರೆ ಕಟ್ಟಡಕ್ಕೆ ತೋಡಿದ ಗುಂಡಿಯ ಬಗ್ಗೆ, ಅದರಿಂದ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತಂತೆ, ಗುಂಡಿಯನ್ನು ಮುಚ್ಚುವ ಕುರಿತು ಸಚಿವರುಜಿಲ್ಲಾಧಿಕಾರಿ ಸ್ವರೂಪಾ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಹೆಚ್ ಅಶೋಕ್‌ರಿಂದ ವಿವರಣೆಯನ್ನು ಪಡೆದರು.

ಈ ಆಸ್ಪತ್ರೆಯ ದುರಸಿ, ಎದುರಿಗೆ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ತೋಡಿದ ಗುಂಡಿ ಹಾಗೂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಸ್ಪತ್ರೆಯ ಕಟ್ಟಡವನ್ನು ಪೂರ್ಣಗೊಳಿಸಲು ಬೇಕಾಗಿರುವ ಹೆಚ್ಚುವರಿ ಅನುದಾನದ ಕುರಿತು ಚರ್ಚಿಸಲು ಇಲಾಖೆಯ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಜು.16ರಂದು ಬೆಂಗಳೂರಿನಲ್ಲಿ ವಿಶೇಷ ಸಭೆ ಕುರಿತು ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಸಚಿವ ಖಾದರ್ ಪ್ರಕಟಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News