×
Ad

ಉಡುಪಿ ಜಿಲ್ಲೆಗೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಜಿಲ್ಲೆಯಲ್ಲಿ ಶಾಂತಿ, ಸಮಾಜಿಕ ಸೌಹಾರ್ದತೆ ಅಗತ್ಯ: ಪ್ರತೀಕ್ ಬಾಯಲ್

ಸುಸ್ಥಿರ ಉಡುಪಿ ನಿರ್ಮಾಣ ಸಂಕಲ್ಪಕ್ಕೆ ‘ವಿಷನ್ ಉಡುಪಿ’

Update: 2026-07-12 22:00 IST

ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಸಹಿತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿರುವ ‘ಉಡುಪಿ ವಿಷನ್ 20-30-35’ ಸರಕಾರಿ ಯೋಜನೆ, ಕಾರ್ಯಕ್ರಮವಲ್ಲ. ಇದೊಂದು ಜನರ ಚಳವಳಿ. ಇದರಲ್ಲಿ ಅಭಿವೃದ್ಧಿಯ ಕನಸು ಕಾಣುವುದು ಮಾತ್ರವಲ್ಲ, ಯೋಜನೆಯನ್ನು ರೂಪಿಸಿ, ಅದನ್ನು ಅನುಷ್ಠಾನಗೊಳಿಸ ಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.

ಸಮೃದ್ಧ, ಸುಸ್ಥಿರ ಹಾಗೂ ಆದರ್ಶ ಉಡುಪಿ ನಿರ್ಮಾಣದ ಸಂಕಲ್ಪಕ್ಕಾಗಿ ಉಡುಪಿ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರೀಸ್, ಕ್ರೆಡೈ ಉಡುಪಿ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಉಡುಪಿ ಶಾಖೆಯ ಸಹಯೋಗದಲ್ಲಿ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಇಂದು ಸಂಜೆ ಆಯೋಜಿಸಲಾದ ‘ವಿಷನ್ 20-30-35’ ಎಂಬ ಮಹಾತ್ವಾಕಾಂಕ್ಷಿ ಯೋಜನೆ ಕುರಿತಂತೆ ಸಮಾಜದ ವಿವಿಧ ವರ್ಗ ಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಆರಂಭಿಕ ಮಾತುಗಳಲ್ಲಿ ಅವರು ಈ ಸಲಹೆ ನೀಡಿದರು.

ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗೆ ನಾವು ಜಿಲ್ಲೆಯನ್ನು ಮೊದಲು ಬಂಡವಾಳ ಸ್ನೇಹಿಯಾಗಿ ರೂಪಿಸಬೇಕಾಗಿದೆ. ಇದಕ್ಕಾಗಿ ನಾವು ಮೂಲಭೂತ ಸತ್ಯವನ್ನು ಅರಿತಿರಬೇಕು. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣ ಬಂಡವಾಳವನ್ನು ಆಕರ್ಷಿಸಲು ಇರುವ ಪ್ರಮುಖ ಸಾಧನ. ಬಂಡವಾಳ ಹೂಡಿಕೆ ಹಾಗೂ ಹೊಸತನ ಸೃಷ್ಟಿಯಾಗುವುದು ಇಂಥ ವಾತಾವರಣದಲ್ಲಿ ಎಂದು ಪ್ರತೀಕ್ ಬಾಯಲ್ ಪ್ರತಿಪಾದಿಸಿದರು.

ಬಂಡವಾಳ ಸ್ನೇಹಿ ಉಡುಪಿ ಸಾಧ್ಯವಾಗುವುದು ಸಹೋದರತ್ವ, ಪರಸ್ಪರ ರ ಮೇಲೆ ಗೌರವ ಹಾಗೂ ಒಗ್ಗಟ್ಟು ಇರಬೇಕಾಗುತ್ತದೆ. ಇಂಥ ಸೌಹಾರ್ದತೆಯ ಹಿನ್ನೆಲೆಯಲ್ಲಿ ನಾವು ಜಿಲ್ಲೆಯನ್ನು ಸರ್ವತೋಮುಖ ಅಭಿವೃದ್ಧಿಗೆ ಕೊಂಡೊಯ್ಯಲು ಸಾಧ್ಯವಿದೆ. ಇದರ ಮೂಲಕ ಕರಾವಳಿಯ ಪ್ರವಾಸೋದ್ಯಮವನ್ನು ಪ್ರಸ್ತುತ ಪಡಿಸಲು ಸಾಧ್ಯವಿದೆ. ಜೀವವೈವಿಧ್ಯತೆಯ ಸಂರಕ್ಷಣೆ, ಪರಿಸರದ ರಕ್ಷಣೆಗೂ ನಾವು ಆದ್ಯತೆಯನ್ನು ನೀಡಬೇಕಿದೆ ಎಂದು ಅವರು ಹೇಳಿದರು.

ಮಹಿಳೆಯರ ಹಾಗೂ ಯುವಜನತೆಯ ಸಬಲೀಕರಣದೊಂದಿಗೆ ಜಿಲ್ಲೆಯ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಸ್ವಸಹಾಯ ಗುಂಪುಗಳನ್ನು ಸಕ್ರೀಯಗೊಳಿಸುವ ಮೂಲಕ ನಾವು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬಹುದು. ಜಿಲ್ಲೆಯಲ್ಲಿ ತ್ಯಾಜ್ಯವನ್ನು ಸಂಪತ್ತಾಗಿ ನಾವು ಪರಿವರ್ತಿಸಲು ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ವಿಷನ್ 20-30-35ಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರೂ 2035ರ ವೇಳೆಗೆ ಉಡುಪಿಯ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಕಾಣಬೇಕಾಗಿರುವ ಬದಲಾವಣೆಯ ಕುರಿತು ಹಲವು ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಚೆಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಎಸಿಸಿಇಎ ಅಧ್ಯಕ್ಷ ಭಗವಾನ್ ದಾಸ್, ಕ್ರೆಡೈ ಅಧ್ಯಕ್ಷ ಸುಧೀರ್ ಶೆಟ್ಟಿ, ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಶಾಸಕರಾದ ಸುನೀಲ್ ಕುಮಾರ್, ಯಶಪಾಲ್ ಸುವರ್ಣ, ಗುರುರಾಜ ಗಂಟೆಹೊಳೆ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಧನಂಜಯ್ ಸರ್ಜಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುನಿಯಾಲು ಉದಯ ಕುರ್ಮಾ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಮನ್ವಯಕಾರರಾದ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಎ.ಪಿ.ಆಚಾರ್, ಡಾ. ಶಿವಾನಂದ ನಾಯಕ್, ಸುರೇಂದ್ರ ನಾಯಕ್, ಪ್ರಸಾದ್ ಉಪಾಧ್ಯ, ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಎಸಿಸಿಇಎ ಮಾಜಿ ಅಧ್ಯಕ್ಷ ಯೋಗೀಶ್ಚಂದ್ರ ದಾರಾ ಸ್ವಾಗತಿಸಿದರು. ಚೇಂಬರ್ ಆಫ್ ಕಾಮರ್ಸ್‌ನ ಗೌರವ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ವಿಜಯೇಂದ್ರ ವಿ. ರಾವ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News