ಭಟ್ಕಳ: ಗೊಂಡ ಸಮುದಾಯದ ಜಾತಿ ಪ್ರಮಾಣಪತ್ರ ಹೋರಾಟ; ಮುಖ್ಯಮಂತ್ರಿಗೆ ಮನವಿ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅತೀ ಹಿಂದುಳಿದ ಗೊಂಡ ಬುಡಕಟ್ಟು ಸಮುದಾಯವು ತಮಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಪರಿಶಿಷ್ಟ ಪಂಗಡ (ಎಸ್ಟಿ) ಜಾತಿ ಹಾಗೂ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದು, ಇದೀಗ ನ್ಯಾಯ ಒದಗಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಭಟ್ಕಳ ತಾಲೂಕಿನಾದ್ಯಂತ ಸುಮಾರು 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಮುಖ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಇವರು ಕೂಲಿ ಕೆಲಸ ಹಾಗೂ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.
1950ರ ಭಾರತದ ಸಂವಿಧಾನದ ಆದೇಶ ಹಾಗೂ 1956ರ ಮೈಸೂರು ಗಜೆಟಿಯರ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೊಂಡ ಜನಾಂಗವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲಾಗಿದೆ ಎಂದು ಸಮುದಾಯದ ಮುಖಂಡರು ತಿಳಿಸಿ ದ್ದಾರೆ. ಆದರೆ, ಆಡಳಿತಾತ್ಮಕ ಗೊಂದಲಗಳು ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಸಿಗುವುದು ಕಷ್ಟಕರವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ವಿರುದ್ಧ ಅಸಮಾಧಾನ: ಸಮುದಾಯದ ಮುಖಂಡರ ಪ್ರಕಾರ, ಶಾಲಾ ದಾಖಲಾತಿಗಳಲ್ಲಿ “ಗೊಂಡ” ಮತ್ತು “ಗೋಂಡ” ಎಂಬ ಸಣ್ಣ ವ್ಯತ್ಯಾಸಗಳನ್ನು ಉಲ್ಲೇಖಿಸಿ ತಹಶೀಲ್ದಾರ ಕಚೇರಿಗಳು ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿವೆ.
ಜಾತಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕೇವಲ ಶಾಲಾ ದಾಖಲೆಗಳನ್ನು ಮಾತ್ರ ಆಧಾರವಾಗಿಸದೆ, ಸಮುದಾಯದ ಆಚಾರ-ವಿಚಾರ, ಕುಲದೈವ, ಸಂಪ್ರದಾಯ ಹಾಗೂ ಬುಡಕಟ್ಟು ಲಕ್ಷಣಗಳನ್ನು ಪರಿಗಣಿಸಬೇಕು ಎಂಬ ನಿಯಮಗಳಿದ್ದರೂ, ಅವುಗಳನ್ನು ಸಮರ್ಪಕವಾಗಿ ಅನುಸರಿಸಲಾಗುತ್ತಿಲ್ಲ ಎಂದು ಸಮುದಾಯದವರು ದೂರಿದ್ದಾರೆ.
ಕಳೆದ ಸುಮಾರು 300 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಕುರಿತು ಗಜೆಟಿಯರ್ಗಳಲ್ಲಿ ಉಲ್ಲೇಖವಿದೆ ಎಂದು ಸಮುದಾಯ ತಿಳಿಸಿದೆ. ಜಾತಿ ಪ್ರಮಾಣಪತ್ರದ ಸಿಂಧುತ್ವ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪವನ್ನು ತಳ್ಳಿಹಾಕಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪುಗಳಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಅರ್ಜಿಗಳನ್ನು ಸಲ್ಲಿಸಿ ಸಮುದಾಯದ ಹಕ್ಕು ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಪ್ರಮುಖ ಬೇಡಿಕೆಗಳು
1. ಕರ್ನಾಟಕ ಎಸ್ಸಿ/ಎಸ್ಟಿ ನಿಯಮ 1992ರ ರೂಲ್ 3-ಎ(3)(ಬಿ) ಅನ್ವಯ ಬುಡಕಟ್ಟು ಲಕ್ಷಣಗಳನ್ನು ಆಧರಿಸಿ ತಕ್ಷಣ ಜಾತಿ ಪ್ರಮಾಣಪತ್ರ ನೀಡಬೇಕು.
2. ಶಾಲಾ ದಾಖಲಾತಿಗಳಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಸ್ಥಳೀಯ ತನಿಖೆ ಮೂಲಕ ನ್ಯಾಯ ಒದಗಿಸಬೇಕು.
3. ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಸಮುದಾಯಕ್ಕೆ ಸಂವಿಧಾನಬದ್ಧ ಹಕ್ಕುಗಳನ್ನು ಒದಗಿಸಬೇಕು.
ಈ ಸಂದರ್ಭದಲ್ಲಿ ಗೊಂಡ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ದುರ್ಗಯ್ಯ ಗೊಂಡ, ಉಪಾಧ್ಯಕ್ಷ ಎಸ್.ಟಿ. ಗೊಂಡ, ಕಾರ್ಯದರ್ಶಿ ಗಣಪತಿ ಗೊಂಡ, ವಕೀಲ ಮಂಜುನಾಥ ಗೊಂಡ, ಗೌರವಾಧ್ಯಕ್ಷ ಸೋಮಯ್ಯ ಗೊಂಡ ಕುಂಟವಾಣಿ, ನಾರಾಯಣ ಗೊಂಡ ಕಟ್ಟಿನಮಕ್ಕಿ, ಮಾದೇವ ಗೊಂಡ, ಬದಿಯಗೊಂಡ ಕುಂಟವಾಣಿ, ಬಸವಯ್ಯ ಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೊಂಡ ಸಮುದಾಯದ ಈ ಹೋರಾಟಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.