ಹಳ್ಳಿಗಳಲ್ಲಿ ವ್ಯಾಸಂಗ ಮಾಡುವ ಸರಕಾರಿ ಶಾಲಾ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ : ಸಿಎಂ ಡಿ.ಕೆ.ಶಿವಕುಮಾರ್
ಶಿಕ್ಷಕರಿಗೆ ಗೌರವ ನೀಡಲು ವೃತ್ತಿಯ ಬಿರುದಾಗಿ Tr. ಬಳಸಲು ತೀರ್ಮಾನ"
ಕೂಡ್ಲಿಗಿ : ಶಿಕ್ಷಕರಿಗೆ ವೃತ್ತಿ ಆಧಾರಿತ ಗೌರವ ನೀಡುವ ಉದ್ದೇಶದಿಂದ ಇನ್ನು ಮುಂದೆ ಶಾಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ ಬಿರುದು ಬಳಸಿಕೊಳ್ಳಲು ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಶನಿವಾರ ‘ಪ್ರಜಾ ಸೇವೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಇತರ ವೃತ್ತಿಪರರಿಗೆ ವೃತ್ತಿ ಆಧಾರಿತ ಗೌರವ ದೊರೆಯುವಂತೆ ಶಿಕ್ಷಕರಿಗೂ ಗೌರವ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದ್ದು, ಇನ್ನು ಮುಂದೆ ಶಾಲಾ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ ಎಂದು ಬಿರುದು ಹಾಕಿಕೊಳ್ಳಬಹುದು. ರಾಜ್ಯದಲ್ಲಿ ಸುಮಾರು 4.50 ಲಕ್ಷ ಶಿಕ್ಷಕರಿದ್ದು, ಸಮಾಜದಲ್ಲಿ ಜನ್ಮ ನೀಡಿದ ತಂದೆ-ತಾಯಿಯರನ್ನು ಮೊದಲ ದೇವರೆಂದು ಹಾಗೂ ಬದುಕಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಎರಡನೇ ದೇವರೆಂದು ಕಾಣಲಾಗುತ್ತದೆ. ಶಿಕ್ಷಕರು ಸಲ್ಲಿಸುವ ಅಕ್ಷರ ಸೇವೆ ಪರಮಾತ್ಮನ ಸೇವೆಯಾಗಿದೆ ಎಂದು ಹೇಳಿದರು.
ಯಾವುದೇ ಸ್ವಾರ್ಥವಿಲ್ಲದೆ ಸಮಾಜವನ್ನು ತಿದ್ದಿ, ಮಾರ್ಗದರ್ಶನ ನೀಡುವ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ದೇಶಕ್ಕೆ ಸೈನಿಕ, ಕಾರ್ಮಿಕ, ಶಿಕ್ಷಕ ಹಾಗೂ ಕೃಷಿಕರು ಪ್ರಮುಖ ಆಧಾರ ಸ್ತಂಭಗಳಾಗಿದ್ದು, ಅವರಿಗೆ ಗೌರವ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.
ಹಳ್ಳಿಗಳಲ್ಲಿ ವ್ಯಾಸಂಗ ಮಾಡುವ ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.