ಕೊಟ್ಟೂರು | ಕಳಪೆ ಕೀಟನಾಶಕ ಮಾರಾಟ ಆರೋಪ: ಅಧಿಕಾರಿಗಳ ಭೇಟಿ, ಪರಿಶೀಲನೆ
ಕೊಟ್ಟೂರು (ವಿಜಯನಗರ) ಪಟ್ಟಣದ ರಸಗೊಬ್ಬರ ಮಳಿಗೆಯೊಂದರಲ್ಲಿ ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದರು.
ರೈತರ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಕೊಟ್ಟೂರು ಹಾಗೂ ಕೂಡ್ಲಿಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಆರ್. ವಿ. ತೇಜವರ್ಧನ್ ಅವರು ಸದರಿ ಮಳಿಗೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಕೀಟನಾಶಕಗಳ ಮಾದರಿಯನ್ನು (Samples) ಸಂಗ್ರಹಿಸಿ, ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ (Lab) ಕಳುಹಿಸಿಕೊಡಲಾಗಿದೆ.
ಪ್ರಯೋಗಾಲಯದ ವರದಿ ಬರುವವರೆಗೆ ಸದರಿ ಕೀಟನಾಶಕಗಳನ್ನು ರೈತರಿಗೆ ಮಾರಾಟ ಮಾಡಬಾರದು ಎಂದು ಕೃಷಿ ಅಧಿಕಾರಿಗಳು ಮಳಿಗೆಯ ಮಾಲಕರಿಗೆ 'ಸ್ಟಾಪ್ ಸೇಲ್ ನೋಟಿಸ್' (Stop sale notice) ಜಾರಿ ಮಾಡಿದ್ದಾರೆ.
"ರೈತರಿಗೆ ಕಳಪೆ ಕೀಟನಾಶಕ ಅಥವಾ ರಸಗೊಬ್ಬರ ಮಾರಾಟ ಮಾಡಿ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪ್ರಯೋಗಾಲಯದ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಸಹಾಯಕ ಕೃಷಿ ನಿರ್ದೇಶಕರಾದ ಆರ್. ವಿ. ತೇಜವರ್ಧನ್ ಅವರು ತಿಳಿಸಿದ್ದಾರೆ.