Vijayanagara | ಹಳೆಯ ವಿದ್ಯಾರ್ಥಿಗಳಿಂದ ಹಸಿರು ಅಭಿಯಾನ
ನವೋದಯ ಶಾಲೆಯಲ್ಲಿ ‘ಮನೆಗೊಂದು ಮರ, ಊರಿಗೊಂದು ವನ’ ಕಾರ್ಯಕ್ರಮ
ಕೂಡ್ಲಿಗಿ/ವಿಜಯನಗರ : ಚಿಕ್ಕ ಜೋಗಿಹಳ್ಳಿಯ ಪಿ.ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯದ 14ನೇ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ “ಮನೆಗೊಂದು ಮರ, ಊರಿಗೊಂದು ವನ” ಎಂಬ ಹಸಿರು ಅಭಿಯಾನವನ್ನು ಆಯೋಜಿಸಿ ಪರಿಸರ ಸಂರಕ್ಷಣೆಗೆ ಮಾದರಿಯಾದರು.
ಶಾಲೆಯ ಉಪಪ್ರಾಂಶುಪಾಲರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಿಯಾನದ ಅಂಗವಾಗಿ ಆಧ್ಯಾತ್ಮಿಕ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವವುಳ್ಳ ಬೇವು, ಬನ್ನಿ, ಬಿಲ್ವ, ಅರಳಿ ಮತ್ತು ಅತ್ತಿ ಮರಗಳನ್ನು ನೆಟ್ಟು ‘ಪಂಚವಟಿ ವನ’ ನಿರ್ಮಿಸಲಾಯಿತು. ಜೊತೆಗೆ ಹಲಸು, ನೇರಳೆ, ಹೊನ್ನೆ, ಹೊಂಗೆ ಹಾಗೂ ನೆಲ್ಲಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನೂ ನೆಡಲಾಯಿತು.
“ಕಲಿತ ನೆಲಕ್ಕೆ ಹಸಿರು ಹಾಸು ಹೊದಿಸುವುದು ನಮ್ಮ ಕರ್ತವ್ಯ” ಎಂಬ ಸಂದೇಶದೊಂದಿಗೆ ಹಳೆಯ ವಿದ್ಯಾರ್ಥಿಗಳು ಸಸಿ ನೆಟ್ಟರೆ, ಅವುಗಳ ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ಪ್ರಸ್ತುತ ವಿದ್ಯಾರ್ಥಿಗಳು ಸ್ವೀಕರಿಸಿದರು.
ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಭಾವನಾತ್ಮಕ ಸಮಾಗಮಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮಕ್ಕೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಇತರ ಹಳೆಯ ವಿದ್ಯಾರ್ಥಿಗಳ ಸಂಘಗಳಿಗೂ ಇದು ಮಾದರಿಯಾಗಿದೆ.