ಹೂವಿನಹಡಗಲಿ ಇಂಜಿನಿಯರಿಂಗ್ ಕಾಲೇಜಿಗೆ ಎಂ.ಪಿ.ಪ್ರಕಾಶ್ ಹೆಸರಿಡುವಂತೆ ಸರಕಾರಕ್ಕೆ ಪತ್ರ ಬರೆಯುತ್ತೇನೆ : ಸಿದ್ದರಾಮಯ್ಯ
ವಿಜಯನಗರ : ಹೂವಿನ ಹಡಗಲಿಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಎಂ.ಪಿ.ಪ್ರಕಾಶ್ ಅವರ ಹೆಸರನ್ನು ನಾಮಕರಣ ಮಾಡುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತೇನೆ. ಆ ಮೂಲಕ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಹೂವಿನಹಡಗಲಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 86ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಪಿ.ಪ್ರಕಾಶ್ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ನಾನು ಮೈಸೂರು ದಸರಾ ಉತ್ಸವವನ್ನು ಆಯೋಜಿಸುತ್ತಿದ್ದ ಸಂದರ್ಭದಲ್ಲಿ, ಹಂಪಿ ಉತ್ಸವವನ್ನೂ ಆರಂಭಿಸೋಣ ಎಂಬ ಸಲಹೆಯನ್ನು ನೀಡಿ, ಅದಕ್ಕಾಗಿ ನನ್ನಿಂದ ಅನುದಾನ ಮಂಜೂರು ಮಾಡಿಸಿಕೊಂಡು, ಮೊದಲ ಬಾರಿಗೆ ಹಂಪಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದವರು ಎಂ.ಪಿ.ಪ್ರಕಾಶ್. ತಮ್ಮ ಆದರ್ಶಗಳು, ಸೇವೆ ಮತ್ತು ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಎಂ.ಪಿ.ಪ್ರಕಾಶ್ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂಬ ದೃಢ ನಂಬಿಕೆ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎಂ.ಪಿ.ಪ್ರಕಾಶ್ ನಮ್ಮನ್ನಗಲಿ 15 ವರ್ಷಗಳು ಕಳೆದಿವೆ. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯವೇ ಒಬ್ಬ ಪ್ರಾಮಾಣಿಕ, ಮೌಲ್ಯಾಧಾರಿತ ಮತ್ತು ಜನಪರ ನಾಯಕನನ್ನು ಕಳೆದುಕೊಂಡಿದೆ. ಅವರು ನನಗಿಂತ ಆರೇಳು ವರ್ಷ ಹಿರಿಯರು. ಜೀವನದುದ್ದಕ್ಕೂ ಸಿದ್ಧಾಂತಗಳಿಗೆ ಬದ್ಧರಾಗಿ ಜನಸೇವೆಯನ್ನೇ ಧ್ಯೇಯವಾಗಿಸಿಕೊಂಡು ರಾಜಕೀಯದಲ್ಲಿ ಹೋರಾಟ ನಡೆಸಿದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಎಂ.ಪಿ.ಪ್ರಕಾಶ್ ಜನತಾ ಪಕ್ಷಕ್ಕೆ ಸೇರುವ ಮೊದಲು ಸಮಾಜವಾದಿ ಪಕ್ಷದಲ್ಲಿದ್ದರು. ನಾನು ಸಮಾಜವಾದಿ ಪಕ್ಷದಲ್ಲಿದ್ದಾಗಲೇ ಅವರು ಅತ್ಯಂತ ಕ್ರಿಯಾಶೀಲ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರೊ.ನಂಜುಂಡಸ್ವಾಮಿ ನನ್ನನ್ನು ಸಮಾಜವಾದಿ ಪಕ್ಷದ ಸದಸ್ಯನನ್ನಾಗಿ ಮಾಡಿದ್ದರು. ಆ ವೇಳೆಗೆ ಎಂ.ಪಿ.ಪ್ರಕಾಶ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು ಎಂದು ಅವರು ಹೇಳಿದರು.
ಎಂ.ಪಿ. ಪ್ರಕಾಶ್ ಅವರು ಅಪಾರ ಜ್ಞಾನ ಹೊಂದಿದ್ದ ಬುದ್ಧಿವಂತ ರಾಜಕಾರಣಿಯಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಅವರಷ್ಟು ಅಧ್ಯಯನಶೀಲರು ಮತ್ತು ಓದಿನ ಆಸಕ್ತಿ ಹೊಂದಿದ್ದ ನಾಯಕರು ವಿರಳ. ವಿವಿಧ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡಿದ್ದರು ಎಂದು ಅವರು ಬಣ್ಣಿಸಿದರು.
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಮೊದಲು ಭೇಟಿ ಮಾಡುತ್ತಿದ್ದ ವ್ಯಕ್ತಿ ಎಂ.ಪಿ.ಪ್ರಕಾಶ್ ಅವರೇ. ಅವರೊಂದಿಗೆ ಚರ್ಚಿಸಿದ ಬಳಿಕ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದೆ. ಅವರು ನನಗೆ ಕೇವಲ ಸ್ನೇಹಿತರಷ್ಟೇ ಅಲ್ಲ, ಆತ್ಮೀಯ ರಾಜಕೀಯ ಸಹೋದ್ಯೋಗಿ ಮತ್ತು ಮಾರ್ಗದರ್ಶಕರಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಎಂ.ಪಿ.ಪ್ರಕಾಶ್ ಜಾತ್ಯತೀತ ವ್ಯಕ್ತಿತ್ವ ಇದ್ದಂತಹ ವ್ಯಕ್ತಿ. ಅವರು ಎಂದಿಗೂ ಜಾತಿ ಆಧಾರಿತ ರಾಜಕೀಯವನ್ನು ಮಾಡಲಿಲ್ಲ. ಒಂದು ವೇಳೆ ಜಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದರೆ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇನ್ನೂ ಉನ್ನತ ಸ್ಥಾನಕ್ಕೇರಬಹುದಾಗಿತ್ತು. ರಾಜಕೀಯ ಲಾಭಕ್ಕಾಗಿ ಸ್ವಾಮೀಜಿಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಯಿಂದಲೂ ಅವರು ಸದಾ ದೂರವಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
2004ರಲ್ಲಿ ನಾವು ಎಲ್ಲರೂ ಜನತಾದಳ(ಎಸ್) ಪಕ್ಷದಲ್ಲಿದ್ದೆವು. ದೇವೇಗೌಡರು, ಇಬ್ರಾಹೀಂ, ಎಂ.ಪಿ.ಪ್ರಕಾಶ್, ಸಿಂಧ್ಯಾ ಮತ್ತು ನಾನು ಸೇರಿ ಪಕ್ಷದ ಪ್ರಮುಖ ನಾಯಕರಾಗಿದ್ದೆವು. ಆ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಬೇಕು ಎಂಬ ಚರ್ಚೆ ನಡೆದಾಗ, ಎಂ.ಪಿ.ಪ್ರಕಾಶ್ ಅವರು ನನ್ನ ಹೆಸರನ್ನೇ ಸೂಚಿಸಿದ್ದರು ಎಂದು ಅವರು ಸ್ಮರಿಸಿದರು.
ನಾನು ಅಹಿಂದ ಸಂಘಟನೆ ರೂಪಿಸುತ್ತಿದ್ದಾಗ ಎಂ.ಪಿ.ಪ್ರಕಾಶ್ ಅವರನ್ನೂ ನನ್ನೊಂದಿಗೆ ಬರಲು ಆಹ್ವಾನಿಸಿದ್ದೆ. ಆದರೆ ಅವರು, ರಾಜಕೀಯ ಪಕ್ಷದಲ್ಲಿಯೆ ಮುಂದುವರಿಯುವುದಾಗಿ ತಿಳಿಸಿದ್ದರು. ಎಂ.ಪಿ.ಪ್ರಕಾಶ್ ಕ್ಯಾನ್ಸರ್ಗೆ ತುತ್ತಾದಾಗ ಜನಾರ್ದಾನ ರೆಡ್ಡಿ ಅವರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರೂ ಅವರ ಮೇಲಿರುವ ಕಳಂಕವನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದ್ದರು. ನಿಷ್ಠಾವಂತ ರಾಜಕಾರಣಿ ಬಗ್ಗೆ ಆ ರೀತಿ ಮಾತನಾಡಿದ್ದು ಅತ್ಯಂತ ನೋವಿನ ಸಂಗತಿಯಾಗಿತ್ತು ಎಂದರು.