×
Ad

Vijayanagara | ಸಂವಿಧಾನ ಜಾಗೃತಿ ಮೂಲಕ ಸೌಹಾರ್ದ ಸಂದೇಶ

Update: 2026-05-25 19:56 IST

ಹೊಸಪೇಟೆ/ವಿಜಯನಗರ: ಎಲ್ಲಾ ಜಾತಿ–ಧರ್ಮದವರು ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ಅಡಿಯಲ್ಲಿ ಸಮಾನತೆಯಿಂದ ಬದುಕುತ್ತಿದ್ದೇವೆ. ಸಮಾಜದಲ್ಲಿ ಪರಸ್ಪರ ಸೌಹಾರ್ದ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಅರಿವು ಹೆಚ್ಚಾಗಬೇಕು ಎಂಬ ಸಂದೇಶದೊಂದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಬುದ್ಧ ಬಸವ ಅಂಬೇಡ್ಕರ್ ಸಮಾನ ವೇದಿಕೆಯ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮನ ಗೌಡ ಅವರಿಗೆ ಗ್ಲೋಬಲ್ ಅಚೀವರ್ ಅವಾರ್ಡ್ ಲಭಿಸಿದ ಹಿನ್ನೆಲೆ ವಿಶೇಷವಾಗಿ ಅಭಿನಂದಿಸಲಾಯಿತು. ಲೇಖಕಿ ನೂರ್ ಜಹಾನ್ ಹಾಗೂ ನರೇಗಾ ಯೋಜನೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಹನಾಜ್ ಅವರನ್ನೂ ವೇದಿಕೆಯ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭರತ್, ಸಮಾಜದಲ್ಲಿ ಜಾತಿ–ಮತ ಭೇದ ಮರೆತು ಸಂವಿಧಾನದ ಆಶಯಗಳಂತೆ ಎಲ್ಲರೂ ಒಂದಾಗಿ ಬದುಕಬೇಕಾಗಿದೆ ಎಂದರು. ಬಿ. ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಗೌತಮ ಬುದ್ಧ ಅವರ ತತ್ವಗಳು ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾಜದಲ್ಲಿ ಒಗ್ಗಟ್ಟು ಮತ್ತು ಸಂವಿಧಾನ ಜಾಗೃತಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವು ವೆಂಕಟೇಶ್ (ಸ್ಲಂ ವೆಂಕಿ) ಹಾಗೂ ಸಿ.ಆರ್. ಭರತ್ ಅವರ ನೇತೃತ್ವದಲ್ಲಿ ನಡೆಯಿತು. ಇಮಾಮ್ ನಿಯಾಜಿ, ಗುಜ್ಜಲ್ ನಾಗರಾಜ್, ತನ್ವೀರ್, ನಿಂಬಗಲ್ ರಾಮಕೃಷ್ಣ, ರೂಪೇಶ್ ಕುಮಾರ್, ವೀರಸ್ವಾಮಿ, ಪೂಜಾರ್ ದುರ್ಗಪ್ಪ, ಕೇಶು, ರಾಮಚಂದ್ರ, ಮರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News