ಸಿ.ಟಿ. ರವಿ ಆಕ್ಷೇಪಾರ್ಹ ಹೇಳಿಕೆ : ಮುಲ್ಲಾ ಸಮಾಜದಿಂದ ತೀವ್ರ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ

Update: 2026-07-28 12:24 IST

ವಿಜಯಪುರ: ಮಾಜಿ ಸಚಿವ ಸಿ.ಟಿ. ರವಿ ಅವರು ನೀಟ್ ಹೋರಾಟದ ಸಂದರ್ಭದಲ್ಲಿ  ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮುಲ್ಲಾ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಕೂಡಲೇ ಮುಲ್ಲಾ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಮುಲ್ಲಾ ಸಮಾಜದ ಮುಖಂಡ ಎಂ.ಸಿ. ಮುಲ್ಲಾ ಅವರು ಸಿ.ಟಿ. ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಹೋರಾಟದಲ್ಲಿ ಮುಲ್ಲಾಗಳ ಕೆಲಸವೇನು ಎಂದು ಸಿ.ಟಿ. ರವಿ ಅವಿವೇಕಿತನದಿಂದ ಮಾತನಾಡಿದ್ದಾರೆ. ಎದೆ ಸೀಳಿದರೆ ಎರಡು ಅಕ್ಷರವಿಲ್ಲ, ಇವರು ಪಂಚರ್ ಹಾಕುವವರು ಎಂದು ನಮ್ಮ ಸಮಾಜವನ್ನು ಹೀಯಾಳಿಸಿದ್ದಾರೆ. ಮುಲ್ಲಾ ಎಂಬುದು ಮುಸ್ಲಿಂ ಧಾರ್ಮಿಕ ಕೊಡುಗೆಯ ಹೆಸರಾಗಿದ್ದು, ಮುಲ್ಲಾ ಎಂಬುದು ಮುಸ್ಲಿಂ ಹೆಸರೇ ಅಲ್ಲ ಎಂದು ಸಿ.ಟಿ. ರವಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜಮಹಾರಾಜರ ಕಾಲದಿಂದಲೂ ಮುಲ್ಲಾಗಳಿಗೆ ಮಾನ್ಯತೆ ಹಾಗೂ ಇನಾಮುಗಳನ್ನು ನೀಡುತ್ತಾ ಬರಲಾಗಿದೆ. ತಾವು ಮುಸ್ಲಿಂ ಸಮಾಜಕ್ಕೆ ಹೇಳಿಲ್ಲ, ಕೇವಲ ಒಬ್ಬ ವ್ಯಕ್ತಿಯನ್ನು ಉದ್ದೇಶಿಸಿ ಮಾತನಾಡಿದ್ದೇನೆ ಎಂದು ಸಿ.ಟಿ. ರವಿ ಈಗ ಮಾತಿನಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಶಿಸ್ತುಬದ್ಧ ಆರ್‌ಎಸ್‌ಎಸ್ ಸಂಘಟನೆಯಿಂದ ಬಂದೆ ಎಂದು ಹೇಳಿಕೊಳ್ಳುವ ಸಿ.ಟಿ. ರವಿಗೆ ಆ ಸಂಘಟನೆಯೇ ಈ ಸಂಸ್ಕಾರವನ್ನು ಕಲಿಸಿಕೊಟ್ಟಿದೆಯೇ ಎಂದು ಪ್ರಶ್ನಿಸಿದರು.

ಸಿ.ಟಿ. ರವಿ ಅವರು ಕೂಡಲೇ ತಮ್ಮ ತಪ್ಪು ತಿದ್ದಿಕೊಂಡು ಮುಲ್ಲಾ ಸಮಾಜದ ಕ್ಷಮೆ ಕೋರಬೇಕು. ಗೃಹಮಂತ್ರಿಗಳು ಕೂಡಲೇ ಸಿ.ಟಿ. ರವಿಯನ್ನು ಬಂಧಿಸಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮುಲ್ಲಾಗಳಿಗೆ ಅಥವಾ ಮುಸ್ಲಿಂ ಸಮಾಜಕ್ಕೆ ಮುಂದೆಯೂ ಇಂತಹ ಅವಹೇಳನಕಾರಿ ಮಾತುಗಳನ್ನು ಮುಂದುವರಿಸಿದರೆ ಸಮಾಜದಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂ ಸಮುದಾಯದ ಜನರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಈ ದೇಶದ ಉನ್ನತ ಸ್ಥಾನಗಳಾದ ಐ.ಎ.ಎಸ್, ಐ.ಪಿ.ಎಸ್, ನ್ಯಾಯಮೂರ್ತಿಗಳು, ಕಲೆ, ಸಂಗೀತ, ರಾಜಕೀಯ, ಕ್ರೀಡೆ, ಆಡಳಿತಾತ್ಮಕ ಕ್ಷೇತ್ರಗಳು ಸೇರಿದಂತೆ ಮುಖ್ಯಮಂತ್ರಿಗಳಾಗಿ ಹಾಗೂ ದೇಶದ ಪ್ರಧಾನ ಮಂತ್ರಿಯಾಗಿ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಜಾಕಿರ್ ಹುಸೇನ್ ಅವರಂತಹ ಮಹಾನ್ ವ್ಯಕ್ತಿಗಳು ದೇಶದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಪ್ರಮುಖ ಪದಾಧಿಕಾರಿಗಳಾದ ಶಮಶರಲಿ ಮುಲ್ಲಾ, ಶಹಜಾನ ಮುಲ್ಲಾ, ಮುಸ್ತಾಕ ಮುಲ್ಲಾ, ರಿಜ್ವಾನ ಮುಲ್ಲಾ ಹಾಗೂ ಎಂ.ಎಂ. ಮುಲ್ಲಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News