ಸುರಪುರ | ಮೂವರು ಸಾಹಿತಿಗಳ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ: ರಾಜಾ ಮುಕುಂದ ನಾಯಕ
ಸುರಪುರ | ಮೂವರು ಸಾಹಿತಿಗಳ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ: ರಾಜಾ ಮುಕುಂದ ನಾಯಕ ತಾಲೂಕು ಕಸಾಪದಿಂದ ನುಡಿನಮನ ಕಾರ್ಯಕ್ರಮ
ಸುರಪುರ: ಮೂವರು ಹಿರಿಯ ಸಾಹಿತಿಗಳು ತಮ್ಮ ಅಮೂಲ್ಯ ಸಾಹಿತ್ಯ ಕೊಡುಗೆಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು, ಅವರ ಬರವಣಿಗೆ ಯುವ ಬರಹಗಾರರಿಗೆ ಸದಾ ದಾರಿದೀಪವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.
ಪಟ್ಟಣದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನರಾದ ಸಾಹಿತಿಗಳಿಗೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿ, ಚತುರ್ಭಾಷಾ ವಿದ್ವಾಂಸ ಪಂಡಿತ ಜನಾರ್ಧನ್ ಪಾಣಿಬಾತೆ ಅವರು ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದರು. ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಹೊಸ ತಲೆಮಾರಿಗೆ ಪರಿಚಯಿಸಲು ಸಂಸ್ಕೃತ ಭಾಷೆಯ ಅಧ್ಯಯನ ಅಗತ್ಯವೆಂಬ ಆಶಯ ಹೊಂದಿದ್ದರು ಎಂದು ಹೇಳಿದರು.
ಹಿರಿಯ ಸಾಹಿತಿ ಚಂದ್ರಕಲಾ ಬಿದರಿ ಅವರು ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ ಹಾಗೂ ಕಥಾಸಾಹಿತ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಹಿರಿಯ ಸಾಹಿತಿ ಸಿ.ಎನ್. ಮುಕ್ತ ಅವರು 56ಕ್ಕೂ ಹೆಚ್ಚು ಕಾದಂಬರಿ, ಕಥಾ ಹಾಗೂ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡುವ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಅನೇಕ ಕೃತಿಗಳು ಚಲನಚಿತ್ರ ಹಾಗೂ ದೂರದರ್ಶನ ಧಾರಾವಾಹಿಗಳಾಗಿಯೂ ಜನಪ್ರಿಯವಾಗಿವೆ ಎಂದು ಹೇಳಿದರು.
ಪಂಡಿತ ಜನಾರ್ಧನ್ ಪಾಣಿಬಾತೆ ಅವರ ಸಹೋದರ ದಾನಪ್ಪ ಪಾಣಿಬಾತೆ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲರಿಗೂ ಸೇರಿದ್ದಾಗಿದೆ ಎಂಬುದನ್ನು ತಮ್ಮ ಅಣ್ಣ ಜೀವನದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರ ಅಗಲಿಕೆ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ಪ್ರಕಾಶ ಅಲಬನೂರ, ಸೋಮಶೇಖರ್ ಚಿಲ್ಲಾಳ, ನ್ಯಾಯವಾದಿ ಮಲ್ಲಿಕಾರ್ಜುನಯ್ಯ ಹಿರೇಮಠ ಹಾಗೂ ಜ್ಞಾನೇಶ್ವರ ಪಾಣಿಬಾತೆ ಅವರು ಸಾಹಿತಿಗಳ ಸಾಹಿತ್ಯ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮೂವರು ಸಾಹಿತಿಗಳ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗೌರವ ಕಾರ್ಯದರ್ಶಿ ಹೆಚ್. ರಾಠೋಡ ನಿರೂಪಿಸಿದರು ಶಿಕ್ಷಕ ಶ್ರೀ ಶೖಲ ಯಂಕಂಚಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ವೆಂಕಟೇಶ ಪಾಟೀಲ ವಂದಿಸಿದರು.
ಪ್ರಮುಖರಾದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ,ಹಿರಿಯ ಸಾಹಿತಿ ನಬಿಲಾಲ ಮಕಾನದಾರ, ನ್ಯಾಯವಾದಿಗಳಾದ ಯಲ್ಲಪ್ಪ ಹುಲಿಕಲ್, ನಾಗರಡ್ಡಿ ಗೌಡಪ್ಪಗೋಳ, ಘನಶ್ಯಾಮ ಪಾಣಿಬಾತೆ, ಬಸವರಾಜ. ಕೆ.ಅಮ್ಮಾಪೂರ, ಹುಲಗಪ್ಪ ನಾಯಕ, ರಾಘವೇಂದ್ರ ಭಕ್ರಿ, ಜಗಧೀಶ ಮಾನು ಸೇರಿದಂತೆ ಹಲವಾರು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.