ಯಾದಗಿರಿ | ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಮ್ಮ ಸರಕಾರ ನೀಡುತ್ತದೆ : ಸಚಿವ ರಹಿಂಖಾನ್ ಭರವಸೆ
ಯಾದಗಿರಿ : ಕಲ್ಯಾಣ ಕರ್ನಾಟಕದಲ್ಲಿ ಹಿಂದುಳಿದ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗಾಗಿ ಬರುವ ಬಜೆಟ್ ನಲ್ಲಿ ನಗರಸಭೆಗೆ ಹೆಚ್ಚಿನ ಅನುದಾನ ನಮ್ಮ ಸರಕಾರದಿಂದ ನೀಡುವುದಾಗಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹಿಂಖಾನ್ ಭರವಸೆ ನೀಡಿದರು.
ನಗರದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣವಾದ ನಗರಸಭೆ ನೂತನ ಕಟ್ಟಡವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ಸಚಿವ, ಶಾಸಕರೊಂದಿಗೆ ಚರ್ಚಿಸಿ ನಗರದ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು.
ಅಧ್ಯಕ್ಷೆ ಅನಪುರ ಅವರು ಇಟ್ಟಿರುವ ಬೇಡಿಕೆಗಳನ್ನು ಹಂತ, ಹಂತವಾಗಿ ಈಡೇರಿಸಲಾಗುವುದು. ನಗರಸಭೆ ಸಿಬ್ಬಂದಿಗೆ ವಸತಿ ವ್ಯವಸ್ಥೆ ತಕ್ಷಣವೇ ಕಲ್ಪಿಸಲಾಗುವುದೆಂದರು. ಈ ಕಟ್ಟಡದ ಗುತ್ತಿಗೆದಾರರ ಬಾಕಿ ಬಿಲ್ 3.50 ಕೋಟಿ ರೂ. ಬಿಡುಗಡೆ ಮಾಡಿಸುವುದಾಗಿ ಸಚಿವರು ಭರವಸೆ ನೀಡಿದರು.
20 ಕೋಟಿ ರೂ. ವೆಚ್ಚದ ತರಕಾರಿ ಮಾರುಕಟ್ಟೆ ನಿರ್ಮಾಣದ ಕಾಮಗಾರಿ ಕುರಿತಂತೆಯೇ ಕೋರ್ಟಿನಲ್ಲಿ ಕೇಸ್ ಇರುವುದರಿಂದ ವಿಳಂಬವಾಗುತ್ತಿದೆ, ಆದಷ್ಟು ಬೇಗನೆ ಅದನ್ನು ಬಗೆಹರಿಸಿಕೊಡಲಾಗುವುದೆಂದರು. ಒಟ್ಟಾರೆ ನಗರದ ಅಭಿವೃದ್ಧಿಗೆ ಜಿಲ್ಲೆಯ ಸಚಿವ, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಹಿಂದುಳಿದ ಜಿಲ್ಲಾ ಕೇಂದ್ರ ಸ್ಥಾನದ ಈ ನಗರಸಭೆಗೆ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನ ನೀಡಬೇಕೆಂದು ಪೌರಾಡಳಿತ ಸಚಿವರಿಗೆ ಮನವಿ ಮಾಡಿದರು. ಜಿಲ್ಲೆಯಾಗಿ 14 ವರ್ಷಗಳು ಕಳೆದರೂ ತಕ್ಕ ಮಟ್ಟಿನ ಅಭಿವೃದ್ಧಿಯಾಗಿಲ್ಲ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಶಾಸಕ, ನಗರಸಭೆ ಅಧ್ಯಕ್ಷರ ಜೊತೆ ತಾವು ಕೈಜೋಡಿಸುವುದಾಗಿ ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ನಗರದ ರಸ್ತೆ, ವಿದ್ಯುತ್, ನೀರು ಸೌಲಭ್ಯಕ್ಕಾಗಿ 23.19 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಮುಗಿದಿವೆ. ಸುಮಾರು 300 ಬೀದಿ ದೀಪಗಳಿಗಾಗಿ ಒಂದು ಕೋಟಿ ರೂ. ಖರ್ಚು ಮಾಡಲಾಗಿದೆ, ಇನ್ನೂ ಎರಡು ಕೋಟಿ ರೂ. ಅನುದಾನದಲ್ಲಿ ಉಳಿದ ಕಡೆ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುವುದೆಂದರು.
ತರಕಾರಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಕೆಕೆಆರ್ ಡಿಬಿಯಿಂದ 3 ಕೋಟಿ ರೂ. ಅನುದಾನ ನೀಡಲಾಗುವುದೆಂದರು. ಅಮೃತ್ ಯೋಜನೆಯಡಿ ಕಾಮಗಾರಿಗೆ 54 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿದರು.
ಪ್ರಾಸ್ತಾವಿಕವಾಗಿ ನಗರಸಭೆ ಅಧ್ಯಕ್ಷೆ ಮಾತನಾಡಿ, ನಗರಸಭೆ 15 ನೇ ಹಣಕಾಸಿನ 3.86 ಕೋಟಿ ರೂ. ಬಿಡುಗಡೆ ಮಾಡಬೇಕು, ಕಟ್ಟಡದ ಬಾಕಿ ಹಣ 3.50 ಕೋಟಿ ರೂ. ನೀಡಬೇಕು, ನಗರದ ಅಭಿವೃದ್ದಿಗೆ ಅನುದಾನ ಕೊರತೆ ಎದುರಾಗಿದ್ದು, ಹೆಚ್ಚಿನ ಅನುದಾನ ನೀಡುವಂತೆಯೇ ಸಚಿವ ರಹಿಂ ಖಾನ್ ಅವರಿಗೆ ಅನಪುರ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕ ವೇಣುಗೋಪಾಲ್ ನಾಯಕ, ಪ್ರಭಾರಿ ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ, ನಗರ ಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ, ಮುಖ್ಯ ಅಭಿಯಂತರ ರಾಧಾಕೃಷ್ಣನ್, ಪೌರಾಡಳಿತ ಸಚಿವ ರೈ ಆಪ್ತ ಕಾರ್ಯದರ್ಶಿ ಕೆ.ಮುರಲಿಧರ, ಯೋಜನಾ ನಿರ್ದೇಶಕ ಲಕ್ಷ್ಮಿ ಕಾಂತ ರೆಡ್ಡಿ, ಮಹೇಶ್ ಮುದ್ನಾಳ, ಕಾರ್ಯ ಪಾಲಿಕೆ ಅಭಿಯಂತರ ವಿಶ್ವನಾಥ್, ಪೌರಾಯುಕ್ತ ಉಮೇಶ್ ಚವಾನ್, ಸ ,ಕಾ.ಅ.ರಜನಿಕಾಂತ ಶೃಂಗೇರಿ, ನಗರಸಭೆ ಸದಸ್ಯರಾದ ಗೌಸಿಯಾ ಬೇಗಂ, ಮಶೇಪ್ಪ ಟಿ. ನಾಯಕ, ವಿಲಾಸ ಬಿ. ಪಾಟೀಲ್, ಸವಿತಾ ಎಸ್. ಮಾ.ಪಾ, ಅಂಬಯ್ಯ ಆರ್. ಶಾಬಾದಿ, ಅಸದ ಬಿನ್ ಬದರ್ ಚಾವೂಸ್, ಪ್ರಭಾವತಿ ಎಂ.ಕಲಾಲ್, ಮಹಾದೇವಮ್ಮ ಎಂ.ಬಿರನೂರ, ಮಂಜುನಾಥ ಆರ್. ದಾಸನಕೇರಿ, ಬಸಮ್ಮ ಎಂ. ಕುರಕುಂಬಳಕರ್, ಚನ್ನಕೇಶವಗೌಡ ಬಾಣತಿಹಾಳ, ವೆಂಕಟರಡ್ಡಿ ವನಿಕೇರಿ, ಉಜ್ಮಾ ಫಾತೀಮಾ, ಸನ್ ಫಾತಿಮ್, ಶಾಂತಮ್ಮ ಎಂ. ಉರನೋರ, ಮನಸೂರ ಅಹ್ಮದ್ ಅಫಗನಿ, ವಿಜಯಲಕ್ಷ್ಮೀ ಕೆ. ನಾನೇಕ್, ಹಣಮಂತ ನಾಯಕ, ನಿರ್ಮಲಾ ಬಿ. ಜಗನ್ನಾಥ, ಇಸ್ಕಾಯಿಲ್ ಸಾಬ, ಹಣಮಂತ ಇಟಗಿ, ಲಕ್ಷ್ಮೀ ಆರ್. ರಾಠೋಡ್, ಮ.ಮಹೆಬೂಬ ಅಲಿ, ಜಯಮ್ಮ ಎಸ್. ಮಡ್ಡಿ, ಚಂದ್ರಕಲಾ ಚಂದ್ರಕಾಂತ ಮಡ್ಡಿ, ಗಣೇಶ ದುಪ್ಪಲ್ಲಿ ಸೇರಿದಂತೆ ಅನೇಕರು ಇದ್ದರು. ಸುಭಾಷಚಂದ್ರ ಕೌಲಗಿ, ಜ್ಯೋತಿ ಲತಾ ತಡಿಬಿಡಿ ನಿರೂಪಿಸಿದರು.