ಗುರುಮಠಕಲ್ | ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ: ರಾತ್ರಿ ವಿಶೇಷ ತರಗತಿಗೆ ಶಾಸಕ ಕಂದಕೂರ್ ಭೇಟಿ
ಗುರುಮಠಕಲ್: ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ರಾತ್ರಿ ವಿಶೇಷ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳ ಅಧ್ಯಯನದ ಪ್ರಗತಿಯನ್ನು ವಿಚಾರಿಸಿದ ಅವರು, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಹೇಳಿದರು. ಶ್ರಮಪಟ್ಟು ಓದಿದರೆ ಯಾವುದೇ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ನಿಮ್ಮ ಯಶಸ್ಸು ಕುಟುಂಬದ ಹೆಮ್ಮೆ ಮಾತ್ರವಲ್ಲ, ಸಮಾಜದ ಗೌರವವನ್ನೂ ಹೆಚ್ಚಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ನೋಡಲ್ ಅಧಿಕಾರಿ ರವೀಂದ್ರ ಚೌಹಣ ಮಾತನಾಡಿ, ಫಲಿತಾಂಶವನ್ನು ಉತ್ತಮಗೊಳಿಸುವ ಉದ್ದೇಶದಿಂದ ಹಲವು ಶಾಲೆಗಳಲ್ಲಿ ರಾತ್ರಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಈ ರಾತ್ರಿ ತರಗತಿಗಳಲ್ಲಿ ಶಿಕ್ಷಕರು ತಮ್ಮ ವೈಯಕ್ತಿಕ ಸಮಯವನ್ನೇ ಮೀಸಲಿಟ್ಟು ವಿದ್ಯಾರ್ಥಿಗಳಿಗೆ ಪಾಠಗಳನ್ನು ಪುನರವಲೋಕನ ಮಾಡಿಸಿ, ಮಾದರಿ ಪ್ರಶ್ನೆಪತ್ರಿಕೆಗಳ ಮೂಲಕ ಅಭ್ಯಾಸ ಮಾಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಗುರು ಕೃಷ್ಣರೆಡ್ಡಿ, ಸಿ.ಆರ್.ಸಿ ಬಾಲಪ್ಪ ಸಿರಿಗೆಮ್, ಲಕ್ಷ್ಮಿಕಾಂತ ರೆಡ್ಡಿ, ವೆಂಕಟರಾಮುಲು, ರಾಜಕುಮಾರ, ಶರಣಗೌಡ, ಕೇ. ರವಿಕಾಂತ್, ನರಸಪ್ಪ, ಶರಣಪ್ಪ ಪಾಟೀಲ್, ಎಸ್.ಎಂ. ಭೂತಾಳ, ಶರಣಪ್ಪ ಪಾಂಚಳ್, ನರಸಪ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.