ಯಾದಗಿರಿ| ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಶರಣಗೌಡ ಕಂದಕೂರ
ಯಾದಗಿರಿ: ಗುರಮಠಕಲ್ ಕ್ಷೇತ್ರದ ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಾಜ್ಯ ಸರ್ಕಾರ ಪ್ರಗತಿ ಪಥ ಯೋಜನೆಯಡಿ ರಸ್ತೆ ನಿರ್ಮಾಣ ಮಾಡುತ್ತಿದೆ, ಅದು ಪ್ರಗತಿ ಪಥವಲ್ಲ, ನಿಧಾನ ಪಥ ಯೋಜನೆಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ವ್ಯಂಗ್ಯವಾಡಿದರು.
ಗುರಮಠಕಲ್ ಕ್ಷೇತ್ರದ ಯಲಸತ್ತಿ ತಾಂಡಾದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ 1 ಕೋಟಿ ರೂ.ವೆಚ್ಛದಲ್ಲಿ ಸಿಸಿ ರಸ್ತೆ ನಿರ್ಮಾಣ, ಯಲಸತ್ತಿ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಡಾ.ಬಾಬೂ ಜಗಜೀವನರಾಮ್ ಭವನ ನಿರ್ಮಾಣ, ಕಾಳೆ ಬೆಳಗುಂದಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಛದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಹಾಗೂ ಬಾಡಿಯಾಳ ಗ್ರಾಮದಲ್ಲಿ 25 ಲಕ್ಷ ರೂ.ವೆಚ್ಛದಲ್ಲಿ ಮಾರೆಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಮೀಣ ಭಾಗದಲ್ಲಿ ಜನತೆ ಶುದ್ಧ ನೀರು, ರಸ್ತೆ, ಮನೆಗಳನ್ನು ಕೇಳುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಬೋರವೆಲ್ ಕೊರೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ನೇರವಾಗಿ ಹರಿ ಹಾಯ್ದರು.
ತಾವು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರವಾಸಕ್ಕೆ ಹೋದಾಗ ಜನತೆ ಶುದ್ಧ ಕುಡಿಯುವ ನೀರು, ಜಮೀನುಗಳಿಗೆ ತೆರಳಲು ರಸ್ತೆ ಕೇಳುತ್ತಾರೆ. ಗುರಮಠಕಲ್ ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿ ಇಂದು ದೆಹಲಿಯಲ್ಲಿ ರಾಜಕಾರಣ ಮಾಡುತ್ತಿರುವರು ಮಾತನಾಡುತ್ತಿಲ್ಲ ಹಾಗೂ ಕ್ಷೇತ್ರದ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ ಎಂದು ಹೇಳಿದರು.
ಗುರಮಠಕಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು, ಸರ್ಕಾರದ ಹಂತದಲ್ಲಿ ಸಾಕಷ್ಟು ಶ್ರಮಪಟ್ಟು ಅನುದಾನ ಬಿಡುಗಡೆಗೊಳಿಸಿ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯ ಒದಗಿಸಲು ಪ್ರಯತ್ನಿಸುತ್ತಿರುವೆ ಎಂದು ಶರಣಗೌಡ ಕಂದಕೂರ ಹೇಳಿದರು.