Yadagiri | ಪಿಕಾರ್ಡ್ ಬ್ಯಾಂಕ್ನ ವಾರ್ಷಿಕ ಮಹಾಸಭೆ
ಯಾದಗಿರಿ : ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನಿಯಮಿತ (ಪಿಕಾರ್ಡ್) ಬ್ಯಾಂಕ್ನ 2025-26ನೇ ಸಾಲಿನ 68ನೇ ವಾರ್ಷಿಕ ಮಹಾಸಭೆ ನಗರದ ಬ್ಯಾಂಕ್ ಆವರಣದಲ್ಲಿ ನಡೆಯಿತು.
ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ರಾಮಣ್ಣ ಬಳಿಚಕ್ರ, ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ತಾಲ್ಲೂಕಿನ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಬ್ಯಾಂಕ್ ಮಾಡಿದೆ ಎಂದು ಹೇಳಿದರು.
ಈ ವರ್ಷ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದೆ ರೈತರು ಬಿತ್ತಿದ ಬೆಳೆಗಳು ಬಹುತೇಕ ನಾಶವಾಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಬ್ಯಾಂಕ್ ಸಿಬ್ಬಂದಿ ಶೇ.90ರಷ್ಟು ಸಾಲ ವಸೂಲಾತಿ ಸಾಧಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬ್ಯಾಂಕ್ ವತಿಯಿಂದ 2.20 ಕೋಟಿ ರೂ. ಸಾಲವನ್ನು ಶೇ.3ರ ಕಡಿಮೆ ಬಡ್ಡಿದರದಲ್ಲಿ ವಿತರಿಸಲಾಗಿದೆ. ರೈತರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಬ್ಯಾಂಕ್ ನಿರ್ದೇಶಕ ಬಸರಡ್ಡಿ ಪಾಟೀಲ್ ಹೆಗ್ಗಣಗೇರಾ ವಾರ್ಷಿಕ ವರದಿ ಮಂಡಿಸಿ, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ನೆರವು ಒದಗಿಸಲು ಸಹಕಾರ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಬ್ಯಾಂಕ್ ವ್ಯವಸ್ಥಾಪಕ ಅಯ್ಯಣರಡ್ಡಿ ನಾಯ್ಕಲ್ ಬ್ಯಾಂಕ್ನ ಆರ್ಥಿಕ ವರದಿ ಮಂಡಿಸಿ, ಮುಂದಿನ ದಿನಗಳಲ್ಲಿ ಅರ್ಹ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವೇದಿಕೆ ಮೇಲೆ ಬ್ಯಾಂಕ್ನ ಉಪಾಧ್ಯಕ್ಷರಾದ ನಾಗರಡ್ಡಿ ಅಣಬಿ, ನಿರ್ದೇಶಕರಾದ ಶರಣಪ್ಪಗೌಡ ಮಾಲಿ ಪಾಟೀಲ್ ಕೌಳೂರ, ಆರ್. ಮಹಾದೇವಪ್ಪ ಅಬ್ಬೆತುಮಕೂರ, ಅಮೃತರಡ್ಡಿ ಪಾಟೀಲ್ ಹತ್ತಿಕುಣಿ, ರಾಘವೇಂದ್ರರಡ್ಡಿ ಕೊಂಕಲ್, ವೆಂಕಟರಾಮುಲು ಚಪೆಟ್ಲಾ, ಶರಣಗೌಡ ಸೌರಾಷ್ಟ್ರಹಳ್ಳಿ, ರವಿಪುತ್ರ ಆರ್.ಹೊಸಳ್ಳಿ, ರಾಮಚಂದ್ರಪ್ಪ ಮುಂಡರಗಿ, ಬನ್ನಪ್ಪ ಹಳಿಗೇರಿ, ಶ್ರೀಮತಿ ಮರೆಮ್ಮ ಮುಂಡರಗಿ, ಜಲ್ಲಮ್ಮ ತಾತಳಗೇರಾ, ಜಿಲ್ಲಾ ವ್ಯವಸ್ಥಾಪಕರಾದ ಅಜಯ ಮಾಲಿ ಪಾಟೀಲ್, ಸಹಕಾರ ಇಲಾಖೆ ಅಧಿಕಾರಿ ಪ್ರಶಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಮಲಾಬಾಯಿ ಸ್ವಾಗತಿಸಿದರು, ಸೌಮ್ಯಶ್ರೀ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಉಪಸ್ಥಿತರಿದ್ದರು.