ಯಾದಗಿರಿ | ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಧರಿಸಿ ಅವರ ಜೀವ ಕಾಪಾಡಿ : ಪಿಎಸ್ಐ ಸಿದ್ದಣ್ಣ ಯಡ್ರಾಮಿ
ಯಾದಗಿರಿ : ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಅಪಘಾತಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಅನ್ನು ಧರಿಸಿ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಧರಿಸಿ ಅವರ ಜೀವವನ್ನು ಕಾಪಾಡಿ ಎಂದು ಪಿಎಸ್ಐ ಸಿದ್ದಣ್ಣ ಯಡ್ರಾಮಿ ತಿಳಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂಚಾರ ಜಾಗೃತಿ ಹಾಗೂ ಅಪರಾಧ ತಡೆ ಕುರಿತು ಮಾತನಾಡಿ, ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ಸೂಚನಾ ಫಲಕಗಳನ್ನು ಆಧರಿಸಿ ವಾಹನವನ್ನು ಚಲಾಯಿಸಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸಿ ಯಾವುದೇ ಕಾರಣಕ್ಕೂ ಅತಿ ವೇಗ ಆಲಕ್ಷ್ಯತನದಿಂದ ವಾಹನವನ್ನು ಚಲಾಯಿಸಬೇಡಿ, ಕುಡಿದು ವಾಹನವನ್ನು ಚಲಾಯಿಸಬೇಡಿ, ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯಲ್ಲಿ ವಾಹನವನ್ನು ಕೊಡಬೇಡಿ, ರಸ್ತೆ ತಿರುವುಗಳಿದ್ದಲ್ಲಿ ಎಡಬಲ ನೋಡಿ ವಾಹನವನ್ನು ಚಲಾಯಿಸಿ ಶಾಲೆ ಆಸ್ಪತ್ರೆ ಇರುವ ರಸ್ತೆಯಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಿ, ತ್ರಿಬಲ್ ರೈಡ್ ಮಾಡಬೇಡಿ, ಮೊಬೈಲ್ ರೈಡ್ ಮಾಡಬೇಡಿ, 4 ಚಕ್ರ ವಾಹನವನ್ನು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಅನ್ನು ಧರಿಸಿ, ವಾಹನ ಸವಾರರು ಕಡ್ಡಾಯವಾಗಿ ವಾಹನ ಚಲನ ಪತ್ರ, ವಾಹನ್ ನೋಂದಣಿ ಪತ್ರ, ವಾಹನ ವಿಮಾ ಪತ್ರ, ವಾಹನ ಎಮಿಷನ್ ಪರೀಕ್ಷೆ ಪತ್ರ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಅವಸರವೇ ಅಪಘಾತಕ್ಕೆ ಕಾರಣವಾಗಿದ್ದು, ವಾಹನಗಳನ್ನು ರಸ್ತೆಯಲ್ಲಿ ನಿಧಾನವಾಗಿ ಚಲಾಯಿಸಿ ಸುರಕ್ಷತೆಯಿಂದ ತಮ್ಮ ಮನೆಗೆ ತಲುಪಿ ಎಂದು ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾನಪ್ಪ ಶಾರದಳ್ಳಿ ಎಎಸ್ಐ, ಬೀರಪ್ಪ ಏಎಸ್ಐ, ಮುಖ್ಯಪೇದೆಗಳಾದ ಶಿವರಾಜ್ ಪಾಣೆಗಾವ್, ಬಸವರಾಜ್ ಮುದುಗಲ್, ಪೊಲೀಸ್ ಪೇದೆಗಳಾದ ಸುರೇಶ್ ಕದಂ,ಹುಸೇನ್ ಬಾಷಾ ,ಲಕ್ಷ್ಮಣ್, ಹಣಮಂತರಾಯ್, ದಯಾನಂದ್ ಜಮಾದಾರ್, ಮಹಿಳಾಪೇದೆ ಲತಾ ಹಾಗೂ ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.